ಈ ಚೇಳು ಕಚ್ಚುವುದಿಲ್ಲ, ಕಚ್ಚಿದ್ರೆ ವಿಷ ಏರುವುದಿಲ್ಲ!
ಯಾದಗಿರಿ, ಆ. 12 : ನಾಗರ ಪಂಚಮಿ ಹಬ್ಬದಂದು ಮನೆಯಲ್ಲಿ ಪುಟ್ಟದಾಗಿ ಮಾಡಿದ ಮಣ್ಣಿನ ನಾಗಪ್ಪನಿಗೆ, ನಾಗರ ಕಲ್ಲಿಗೆ, ಹುತ್ತಕ್ಕೆ ಹಾಲನೆರೆದು, ನಮ್ಮ ಮೇಲೆ ನಿನ್ನ ಕೃಪೆ ಇರಲಪ್ಪ ಎಂದು ಬೇಡಿಕೊಳ್ಳುವವರೆ ಎಲ್ಲ. ವಿಸ್ಮಯವೆಂಬಂತೆ ಅಲ್ಲಲ್ಲಿ ಸಾಕ್ಷಾತ್ ನಾಗರಹಾವು ಕಾಣಿಸಿಕೊಂಡು ಜನರಲ್ಲಿ ಭಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾಗರಹಾವು ಹಾಲು ಕುಡಿಯುವುದಿಲ್ಲ ಎಂದು ತಿಳಿದಿದ್ದರೂ ಹಾಲನೆರೆಯಲು ಮುಂದಾಗುತ್ತಾರೆ.
ಶ್ರಾವಣ ಮಾಸ ಶುಕ್ಲಪಕ್ಷದ ಪಂಚಮಿಯಂದು ನಾಗರಮೂರ್ತಿಗೆ ಹಾಲನೆರೆಯುವುದು ಸರ್ವೇಸಾಮಾನ್ಯ. ಆದರೆ ಅಂದಿನ ದಿನ ಜೀವಂತ ಚೇಳಿನ ಪೂಜೆ ಮಾಡುವುದನ್ನು, ಅವುಗಳ ಜೊತೆ ಸಂಭ್ರಮಿಸುವುದನ್ನು ನೀವು ನೋಡಿದ್ದಿರಾ? ಇಲ್ಲ ಅಲ್ಲವೆ? ಯಾಕೆಂದರೆ ಚೇಳು ಎಂದರೆ ನಾವು ಮಾರುದ್ದ ದೂರ ಜಿಗಿಯುತ್ತೇವೆ. ಆದರೆ, ಯಾದಗಿರಿಯ ಜನರು ಜೀವಂತ ಚೇಳಿನ ಜೊತೆ ಆಟವಾಡುವ ವಿಸ್ಮಯವನ್ನು ನೋಡಲೇಬೇಕು.
ಯಾದಗಿರಿ ತಾಲ್ಲೂಕಿನ ಕಂದಕೂರು ಗ್ರಾಮದ ಸುತ್ತಲೂ ಹಚ್ಚ ಹಸುರಿನ ಬೆಟ್ಟ-ಗುಡ್ಡ. ಆ ಬೆಟ್ಟದ ಮಧ್ಯೆ ಕೆಂಪು ಗುಡ್ಡ. ಅದರ ಮೇಲಿರುವುದೇ ಕೊಂಡಮಾಯಿ ದೇವಾಲಯ. ಅತೀ ಅಪರೂಪದ ಚೇಳಿನ ಮೂರ್ತಿ ಇಲ್ಲಿದೆ. ಈ ದೇವಿಯ ಕೃಪೆಯಿಂದ ನಾಗರ ಪಂಚಮಿ ದಿನ ಇಲ್ಲಿ ಹೇರಳವಾಗಿ ಚೇಳು ಬರುತ್ತವೆ. ಅವುಗಳನ್ನು ಹಿಡಿದು ಜನರು ಸಂಭ್ರಮ ಪಡುತ್ತಾರೆ. ತಮಾಷೆ ಅಂದ್ರೆ, ಬೇರೆ ದಿನಗಳಲ್ಲಿ ಇಲ್ಲಿ ಚೇಳುಗಳು ಇರುವುದಿಲ್ಲ.
ಚೇಳುಗಳನ್ನು ಕಂಡರೆ ಯಾರಿಗೆ ಭಯವಾಗುವುದಿಲ್ಲ ಹೇಳಿ? ಆದರೆ ಇಲ್ಲಿನ ಜನರಿಗೆ ಭಯವೆಂಬುದೇ ಇಲ್ಲ. ಆ ಚೇಳುಗಳನ್ನು ಆಟಿಕೆ ಸಾಮಾನುಗಳೇನೋ ಎಂಬಂತೆ ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಕೆಲವೊಬ್ಬರು ನಾಲಿಗೆ ಮೇಲೆ ಕೂಡ ಚೇಳನ್ನು ಹರಿಯಬಿಡುವುದನ್ನು ನೋಡಿ ಮೈ ಝುಂ ಅನ್ನದೆ ಇರದು. ಆದರೆ, ಇದೆಲ್ಲ ದೇವಿಯ ಕೃಪೆ ಎಂದು ನಾಗರಿಕರು ನಿರ್ಭೀತಿಯಿಂದ ವರ್ತಿಸುತ್ತಾರೆ. ಈ ವಿಸ್ಮಯದ ಸುದ್ದಿಚಿತ್ರ ಇಲ್ಲಿದೆ ನೋಡಿರಿ.
ಮೈ, ನಾಲಿಗೆ ಮೇಲೆ ವಿಷಕಾರಿ ಚೇಳು
ಕರ್ನಾಟಕ ಅಲ್ಲದೇ ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಹೀಗೆ ಬಂದಂತಹ ಭಕ್ತಾದಿಗಳು ಚೇಳುಗಳನ್ನು ಪೂಜೆ ಮಾಡುವುದರ ಜೊತೆಗೆ ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಾರೆ. ಅಲ್ಲದೇ ಮೈ, ನಾಲಿಗೆ ಮೇಲೆ ವಿಷಕಾರಿ ಚೇಳುಗಳನ್ನು ಹರಿಸಿಕೊಂಡು ಸಂತಸ ಪಡುತ್ತಾರೆ.
ಎಲ್ಲ ಕೊಂಡಮಾಯಿ ದೇವಿ ಕೃಪೆ
ವಿಷಕಾರಿ ಚೇಳು ಕಚ್ಚಿದರೂ ವಿಷ ಏರುವುದಿಲ್ಲ. ಒಂದು ವೇಳೆ ವಿಷ ಏರಿದರೆ ಕೊಂಡಮಾಯಿ ದೇವಿಯ ಭಂಡಾರ (ಹಳದಿ ಬಣ್ಣ) ಹಚ್ಚಿಕೊಂಡರೆ ಕ್ಷಣಮಾತ್ರದಲ್ಲಿ ವಾಸಿಯಾಗುತ್ತೆ ಎಂಬುವುದು ಭಕ್ತರ ನಂಬಿಕೆ. ಹಾಗಾಗಿ ಇಲ್ಲಿನ ಭಕ್ತರಿಗೆ ಹೆದರಿಕೆ ಎನ್ನುವ ಮಾತೇ ಇಲ್ಲ.
ಕೆಂಪು ಗುಡ್ಡದಲ್ಲಿ ಮಾತ್ರ ಚೇಳುಗಳು
ಕಂದಕೂರು ಸುತ್ತಲಿನ ಈ ಗುಡ್ಡದ ಮೇಲಿರುವ ಯಾವುದೇ ಕಲ್ಲು ತೆಗೆದರೂ ಚೇಳುಗಳು ಕಾಣುತ್ತವೆ. ಸೂತ್ತಲೂ ಗುಡ್ಡಗಳು ಇದ್ದರೂ ಈ ಕೆಂಪು ಗುಡ್ಡದಲ್ಲಿ ಮಾತ್ರ ಚೇಳುಗಳು ದೊರೆಯುತ್ತವೆ. ಜನರು ಇದು ಕೊಂಡಮಾಯಿ ದೇವಿಯ ಪವಾಡ ಎಂದು ನಂಬಿದ್ದಾರೆ. ಬೇರೆ ಸಮಯದಲ್ಲಿ ಗ್ರಾಮಸ್ಥರಿಗೆ ಕಚ್ಚಬಾರದು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಚೇಳುಗಳ ಆರಾಧ್ಯ ಮಾಡುತ್ತಾರೆ.
ಮಕ್ಕಳಿಗೆ ಚೇಳುಗಳು ಕಚ್ಚುವುದಿಲ್ವಂತೆ
ಚಿಕ್ಕ ಮಕ್ಕಳು ಕೈಯಲ್ಲಿ ವಿಷಕಾರಿ ಚೇಳುಗಳನ್ನು ಹಿಡಿಯುತ್ತಾರೆ. ಆ ಮಕ್ಕಳಿಗೆ ಚೇಳುಗಳು ಕಚ್ಚುವುದಿಲ್ವಂತೆ. ಎಲ್ಲಾ ಕಡೆ ನಾಗರ ಪಂಚಮಿಯಂದು ಕಲ್ಲು ನಾಗಪ್ಪನಿಗೆ ಹಾಲೆರೆಯುತ್ತಾರೆ. ಆದರೆ ಕೊಂಡಮಾಯಿ ದೇವಸ್ಥಾನದಲ್ಲಿ ಮಾತ್ರ ಚೇಳುಗಳ ಮೂರ್ತಿಗೆ ವಿಶೇಷವಾದ ಪೂಜೆ ಮಾಡಿದ ಚೇಳುಗಳನ್ನು ಹಿಡಿದು ಸಂಭ್ರಮಿಸುತ್ತಾರೆ.
ಮಾನವ ಸ್ನೇಹಿ ಚೇಳುಗಳೇ ವಿಸ್ಮಯ
ಸಾಮಾನ್ಯವಾಗಿ ಕೆಂಪು ಮಣ್ಣು ಮತ್ತು ಬೆಟ್ಟಗಳಲ್ಲಿ ಚೇಳುಗಳು ಕಾಣ ಸಿಗುತ್ತವೆ. ಒಂದೇ ದಿನದಂದು ಇಷ್ಟೊಂದು ಆಗಾದ ಪ್ರಮಾಣದಲ್ಲಿ ದೇವಸ್ಥಾನದ ಸುತ್ತಲು ಸಿಗುವುದು ಅಚ್ಚರಿಯಾದರೆ, ವಿಷಜಂತು ಎನ್ನುವ ಚೇಳುಗಳು ಕಚ್ಚಿದರು ಇಲ್ಲಿ ವಿಷ ಎರುವುದಿಲ್ಲ ಜೊತೆಗೆ ಮಾನವ ಸ್ನೇಹಿಯಾಗಿ ವರ್ತಿಸುವುದು ನೋಡಿದರೆ, ವಿಸ್ಮಯವೇ ಸರಿ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ