ಖಾಸಗಿ ಬಸ್ ಗಳಿಗೆ ಜಿಪಿಎಸ್ ಹೊಸ ವಿಕ್ರಮ
ಅತಿ ವೇಗ, ಅಜಾಗರೂಕತೆಯ ಚಾಲನೆ, ಅಪಘಾತ, ಸಾವು-ನೋವು, ಹಾನಿ ಹೀಗೆ ಸಾರಿಗೆ ಸಮಸ್ಯೆಗೆ ಜಿಪಿಎಸ್ ಪರಿಹಾರವಾಗಬಲ್ಲುದು. ಸಾರಿಗೆ ಅದಾಲತ್ ವೇಳೆ ಸಾರ್ವಜನಿಕರು ಬಸ್ ಗಳಿಗೆ 'ಸ್ಪೀಡ್ ಗವರ್ನರ್' ಅಳವಡಿಸಿ ಎಂದು ಆಗ್ರಹಿಸುವುದು ಇದ್ದೇ ಇದೆ. ಜಿಲ್ಲಾಡಳಿತ ಮಾತ್ರ ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕೆ.ಪುತ್ರನ್ ಸ್ಟೇಟ್ ಬ್ಯಾಂಕ್-ಬಜ್ಪೆ ಮಧ್ಯೆ ಚಲಿಸುವ ತನ್ನ ರಾಮ್ ದೇವ್ ಬಸ್ ಗೆ 'ಜಿಪಿಎಸ್' ಅಳವಡಿಸಿದ್ದಾರೆ.
ಸದ್ಯಕ್ಕೆ ಪ್ರಾಯೋಗಿಕವಾಗಿ ಜಿಪಿಎಸ್ ಅಳವಡಿಸಲಾಗಿದೆ. ಇದು ಯಶಸ್ವಿಯಾದರೆ ಈ ರೂಟಿನಲ್ಲಿ ಚಲಿಸುವ 14 ಬಸ್ ಗಳಿಗೂ ಅಳವಡಿಸುವ ಪ್ರಯತ್ನ ಮಾಡಲಾಗುವುದು. ಬಳಿಕ ಇತರ ರೂಟ್ ನಲ್ಲೂ ಅಳವಡಿಸಲು ಬಸ್ ಮಾಲಕರು ಮುಂದೆ ಬರುವ ವಿಶ್ವಾಸವಿದೆ ಎಂದು ವಿ.ಕೆ ಪುತ್ರನ್ ಹೇಳಿದ್ದಾರೆ.
'ಜಿಪಿಎಸ್ ಅಳವಡಿಸಿದರೆ ಕಿ.ಮೀ. 40ಕ್ಕಿಂತ ಕಡಿಮೆ ವೇಗದಲ್ಲಿ ಬಸ್ ಚಲಿಸಿದರೆ ಹಸಿರು, 40 ರಿಂದ 60ರ ವೇಗದಲ್ಲಿ ಚಲಿಸಿದರೆ ನೀಲಿ, 60ಕ್ಕಿಂತ ಅಧಿಕ ವೇಗದಲ್ಲಿ ಚಲಿಸಿದರೆ ಕೆಂಪು ಸಿಗ್ನಲ್ ಸೂಚಿಸುತ್ತದೆ. ಅಲ್ಲದೆ ಯಾವ ಸ್ಟಾಪ್ ಗಳಲ್ಲಿ ಬಸ್ ಗಳನ್ನು ನಿಲ್ಲಿಸಲಾಯಿತು,ಎಷ್ಟು ಕಾಲ ನಿಲ್ಲಿಸಲಾಯಿತು. ಎಲ್ಲಿಂದ ಎಲ್ಲಿಗೆ, ಎಷ್ಟು ಗಂಟೆಗೆ ಬಸ್ ತಲುಪಿತು ಎಂಬುದನ್ನು ನಿಖರವಾಗಿ ತಿಳಿಯಬಹುದಾಗಿದೆ. ಕೇಂದ್ರಿಕೃತ ಸರ್ವರ್ ಸೆಂಟರ್ ನಲ್ಲಿ ಇದೆಲ್ಲವನ್ನು ಗಮನಿಸಬಹುದಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಪಾರಮ್ಯವಿದೆ. ರಾಜ್ಯದ ಇತರೆಡೆ ಸರಕಾರಿ ಬಸ್ಸುಗಳು ಮೇಲುಗೈ ಸಾಧಿಸಿದ್ದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹೊರತಾಗಿದೆ. ಇಲ್ಲಿನ ಸಿಟಿ, ಸರ್ವಿಸ್, ಎಕ್ಸ್ ಪ್ರೆಸ್ ಬಸ್ ಸಾರಿಗೆ ಬಗ್ಗೆ ಅಧ್ಯಯನ ಮಾಡಲು ವಿದೇಶಿ ತಂಡ ಕೂಡ ಮಂಗಳೂರು-ಉಡುಪಿಗೆ ಬಂದು ಹೋದ ದಾಖಲೆಯಿದೆ. ಬಸ್ ಕಾರ್ಮಿಕರ ಸಮಸ್ಯೆ ಹೊರತುಪಡಿಸಿದರೆ ಸರ್ಕಾರಿ ಬಸ್ ಗಳಿಗೂ ಸೆಡ್ಡು ಹೊಡೆಯುತ್ತಾ ಖಾಸಗಿ ಬಸ್ ಗಳು ಚಲಿಸುತ್ತಿವೆ.
ಈ ಹಿಂದೆ ಮಂಗಳೂರು-ಉಡುಪಿ ಮಾರ್ಗದ ಬಸ್ ಗಳಿಗೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ (ಜಿಪಿಎಸ್) ಅಳವಡಿಸಲಾಗಿತ್ತು ಆದರೆ, ಯಶಸ್ವಿಯಾಗಿರಲಿಲ್ಲ. ಈಗ ಈ ಹೊಸ ಪ್ರಯೋಗ ಫಲಕೊಡುವುದೇ ಕಾದು ನೋಡಬೇಕಿದೆ.