ಕೋಲಾರ : ಹೆಂಡತಿ ಕೊಂದು ಜಮೀನಿನಲ್ಲಿ ಹೂತಿಟ್ಟಿದ್ದ
ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದ ಹೊರವಲಯದ ಕಲಂತ್ರಾಯನಗುಟ್ಟೆ ಸಮೀಪ ಅಶ್ವತ್ಥಪ್ಪ ಎಂಬುವವರ ಜಮೀನಿನಲ್ಲಿ ಅಪರಿಚಿತ ಮಹಿಳೆಯ ಶವ ಒಂದು ತಿಂಗಳ ಹಿಂದೆ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದಾರೆ.
ಗೌರಿಬಿದನೂರು ಪೊಲೀಸರು ಭಾನುವಾರ ಕೊಲೆ ಆರೋಪಿ ಗಜೇಂದ್ರರಾವ್ ಅಲಿಯಾಸ್ ಗಜೇಂದ್ರ (30) ಅವರನ್ನು ಬಂಧಿಸಿದಾಗ, ಹೆಂಡತಿ ವನಜಾಕ್ಷಿ (25) ಅವರನ್ನು ಕೊಲೆ ಮಾಡಿ ಜಮೀನಿನಲ್ಲಿ ಶವವನ್ನು ಹೂತಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.
ಘಟನೆ ಏನು : ಗಜೇಂದ್ರ ಅತ್ತೆ ಮಗಳಾದ ವನಜಾಕ್ಷಿಯನ್ನು 5 ವರ್ಷದ ಹಿಂದೆ ವಿವಾಹವಾಗಿದ್ದ. ಒಂದು ವರ್ಷದ ಹಿಂದೆ ಗೊಟಕನಾಪುರ ಗ್ರಾಮದ ಶಶಿಕಲಾ ಎಂಬ ಹುಡುಗಿಯನ್ನು ಪ್ರೀತಿಸಿ ಮತ್ತೊಂದು ಮದುವೆಯಾಗಿದ್ದನು.
ಇದರಿಂದಾಗಿ ಮನೆಯಲ್ಲಿ ವನಜಾಕ್ಷಿ ಜೊತೆ ಆಗಾಗ ಗಜೇಂದ್ರ ಜಗಳವಾಡುತ್ತಿದ್ದನು. ವನಜಾಕ್ಷಿಯು ಬೇರೊಬ್ಬನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಇದರಿಂದ ಕೆರಳಿದ ಗಜೇಂದ್ರ ಆಕೆಯ ಜೊತೆ ಜಗಳ ಮಾಡಿದ್ದ.
ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗಜೇಂದ್ರ ಜೂನ್ 21ರಂದು ಇಂಡಿಕಾ ಕಾರು ಬಾಡಿಗೆಗೆ ಪಡೆದು, ವನಜಾಕ್ಷಿ ಮತ್ತು ಮಗನನ್ನು ಕಾರಿನಲ್ಲಿ ದೇವಸ್ಥಾನಕ್ಕೆ ಹೋಗೊಣ ಎಂದು ನಂಬಿಸಿ ಲೇಪಾಕ್ಷಿಗೆ ಕರೆದುಕೊಂಡು ಹೋಗಿದ್ದಾನೆ.
ಕಾರಿನಲ್ಲಿ ಹೆಂಡತಿಯೊಡನೆ ಜಗಳ ಪ್ರಾರಂಭಿಸಿದ್ದಾನೆ. ವನಜಾಕ್ಷಿ ಗಲಾಟೆ ಹೆಚ್ಚಾದಾಗ, ಸೀರೆಯಿಂದ ಕುತ್ತಿಗೆ ಬಿಗಿದು ಆಕೆಯನ್ನು ಕೊಂದು, ರಸ್ತೆ ಬದಿಯಲ್ಲಿದ್ದ ಜಮೀನೊಂದರಲ್ಲಿ ಹೂತು ಹಾಕಿದ್ದ. ಘಟನೆಯ ಕುರಿತು ಯಾವುದೇ ಮಾಹಿತಿ ಸಿಗದ ಪೊಲೀಸರು ಒಂದು ತಿಂಗಳಿನಿಂದ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರು.
ದೂರು ದಾಖಲು : ಆ.8 ರಂದು ವನಜಾಕ್ಷಿ ತಂದೆ ತುಕಾರಾಮ್ ತನ್ನ ಮಗಳು ಕಳೆದ 40 ದಿನಗಳಿಂದ ಕಾಣೆಯಾಗಿರುವ ಬಗ್ಗೆ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಾಗ, ಶವದ ಫೋಟೋವನ್ನು ಪೊಲೀಸರು ತೋರಿಸಿದ್ದಾರೆ.
ಶವದ ಬಲಗೈ ಮೇಲೆ ವಿಜಿ ಎಂಬ ಹಚ್ಚೆಯನ್ನು ನೋಡಿ ಇದು ತಮ್ಮ ಮಗಳು ಎಂದು ತುಕಾರಾಮ್ ಗುರುತಿಸಿದ್ದಾರೆ. ತಕ್ಷಣ ಗಜೇಂದ್ರನಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅವನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ