ರಾಹುಲ್ ಅಥವಾ ಪ್ರಿಯಾಂಕಾ ಚಿಕ್ಕಮಗಳೂರಿನಿಂದ ಸ್ಪರ್ಧೆ?
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ದಿನದಿಂದ ದಿನಕ್ಕೆ ಸೊರಗುತ್ತಿದೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್ ಪಾಲಿಗೆ ಸುರಕ್ಷಿತ ಕ್ಷೇತ್ರವಾಗಿದೆ ಎಂಬ ಆಲೋಚನೆ ಹೈಕಮಾಂಡ್ ನಾಯಕರಲ್ಲಿ ಬಂದಿದೆಯಂತೆ. ಸ್ವಕ್ಷೇತ್ರ ಅಮೇಥಿ ಕೂಡಾ ಈಗ ರಾಹುಲ್ ಪಾಲಿಗೆ ಸುರಕ್ಷಿತವಾಗಿ ಉಳಿದಿಲ್ಲ ಎಂದು ಸಮೀಕ್ಷೆ ವರದಿ ಬಂದಿದೆ. ಹೀಗಾಗಿ ಸೋನಿಯಾ ಗಾಂಧಿ ಅವರು ರಾಹುಲ್ ಅವರನ್ನು ದಕ್ಷಿಣದತ್ತ ಮುಖ ಮಾಡುವಂತೆ ಮಾಡಿದ್ದಾರೆ.
ಕೆಪಿಸಿಸಿಯಲ್ಲಿ ಚಟುವಟಿಕೆ: ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧಯ್ತೆ ಬಗ್ಗೆ ವದಂತಿಗಳು ಹಬ್ಬುತ್ತಿದ್ದಂತೆ ಕೆಪಿಸಿಸಿಯಲ್ಲಿ ಚಟುವಟಿಕೆಗಳು ಗರಿಗೆದರಿದೆ.ಈ ಬಗ್ಗೆ ಹಾಲಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೂ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು 2012ರಲ್ಲೇ ಕಣಕ್ಕಿಳಿಸಲು ಕರ್ನಾಟಕ ಕಾಂಗ್ರೆಸ್ ನಿರ್ಧರಿಸಿತ್ತು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಹುಟ್ಟು ನೀಡಿದ್ದ ಚಿಕ್ಕಮಗಳೂರು ಕ್ಷೇತ್ರದಿಂದಲೇ ಮೊಮ್ಮಗಳು ಪ್ರಿಯಾಂಕಾ ಅಥವಾ ಮೊಮ್ಮಗ ರಾಹುಲ್ ಅವರು ಕಣಕ್ಕಿಳಿದರೆ ಉತ್ತಮ ಅಡಿಪಾಯ ಸಿಗುತ್ತದೆ ಎಂದು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, 'ಹೈಕಮಾಂಡ್ ಗೆ ನಮ್ಮ ಆಯ್ಕೆಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದೇವೆ. ಜಯಪ್ರಕಾಶ್ ಹೆಗ್ಡೆ ಅವರು ಒಮ್ಮತ ಅಭ್ಯರ್ಥಿಯಾಗಿದ್ದಾರೆ ನಿಜ. ಆದರೆ ಸೋನಿಯಾಜಿ ಅವರ ಪುತ್ರಿ ಪ್ರಿಯಾಂಕಾ ಅಥವಾ ರಾಹುಲ್ ಅವರನ್ನು ಕಣಕ್ಕಿಳಿಯಲು ಬಯಸಿದರೆ ಅದಕ್ಕಿಂತ ಸೌಭಾಗ್ಯ ಬೇರೆ ಇಲ್ಲ' ಎಂದು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.