ನಾಯಂಡಹಳ್ಳಿಯಲ್ಲಿ ಭೀಕರ ಅಪಘಾತ, ನಾಲ್ಕು ಸಾವು
ಬೈಕ್ ಸವಾರನನ್ನು ಸಿದ್ದರಾಜು ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಸಿದ್ದರಾಜು, ಅವರ ಹೆಂಡತಿ ಮತ್ತು ಒಬ್ಬ ಮಗ ಸ್ಥಳದಲ್ಲೇ ಮೃತರಾಗಿದ್ದರೆ, ಮತ್ತೊಬ್ಬ ಮಗ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾನೆ. ಸಿದ್ದರಾಜು ಅವರು ಕೆ.ಎಂ. ದೊಡ್ಡಿಯ ಮೂಲದವರು ಎಂದು ತಿಳಿದುಬಂದಿದೆ.
ಸಿಗ್ನಲ್ ಇಲ್ಲದ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಪೊಲೀಸರ ಅಣತಿಗಾಗಿ, ಜ್ಞಾನಭಾರತಿ ಕಡೆಯಿಂದ ಬರುತ್ತಿದ್ದ ಸಿದ್ದರಾಜು ತಮ್ಮ ಬೈಕ್ ನಿಲ್ಲಿಸಿದಾಗ, ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಬೈಕ್ ಮೇಲೆ ಏರಿಸಿಬಿಟ್ಟಿದ್ದಾನೆ. ನಂತರ ಕ್ಯಾಂಟರ್ ಮಾರುತಿ ಓಮ್ನಿಗೂ ಡಿಕ್ಕಿ ಹೊಡೆದಿದೆ. ನೂರು ಅಡಿಗಳಷ್ಟು ಸಾಗಿದ ಕ್ಯಾಂಟರ್ ಮುಗುಚಿಬಿದ್ದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬಿದ್ದ ಕ್ಯಾಂಟರ್ ನಿಂದ ಚಾಲಕ ಪರಾರಿಯಾಗಿದ್ದಾನೆ.
ಅಪಘಾತದ ದೃಶ್ಯ ಎಷ್ಟು ಭೀಕರವಾಗಿತ್ತೆಂದರೆ, ಅಪಘಾತಕ್ಕೀಡಾದವರ ಅವಯವಗಳು, ಹೆಲ್ಮೆಟ್ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಅದೃಷ್ಟವಶಾತ್ ವ್ಯಾನ್ ನಲ್ಲಿ ಇದ್ದವರಿಗೆ ಯಾವುದೇ ಗಾಯವಾಗಿಲ್ಲ. ಅಪಘಾತ ಸಂಭವಿಸಿದ ನಂತರ ಮೈಸೂರು ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹೆಚ್ಚುವರಿ ಆಯುಕ್ತ ದಯಾನಂದ್ ಅವರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕ್ಯಾಂಟರ್ ಬ್ರೇಕ್ ಫೇಲ್ ಆಗಿರಬಹುದು ಎಂದು ಶಂಕಿಸಲಾಗಿದೆ. ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೃತರ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸಂಬಂಧಿಕರ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. [ಮೈಸೂರು ರಸ್ತೆಯಲ್ಲಿನ ಕಿತ್ತುಹೋದ ರಸ್ತೆ]