ದುರ್ಗಾಪರಮೇಶ್ವರಿ ಮುಂದೆ ಪ್ರಮಾಣ ಮಾಡಿದ ಗ್ರಾಮಸ್ಥರು
ಮಂಗಳೂರು, ಆ 6: ಪ್ರಸ್ತಾವಿತ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಬೆಲೆ ತೆತ್ತಾದರೂ ಅಪಾರ ಪ್ರಮಾಣದ ಫಲವತ್ತಾದ ಕೃಷಿ ಭೂಮಿ ಅಣುಸ್ಥಾವರದ ಪಾಲಾಗಲು ಬಿಡುವುದಿಲ್ಲ ಎಂದು ಸ್ಥಳೀಯರು ಐತಿಹಾಸಿಕ ಕಟೀಲು ದುರ್ಗಾಪರಮೇಶ್ವರಿ ದೇವಳದಲ್ಲಿ ಪ್ರಮಾಣ ಮಾಡಿದ್ದಾರೆ.
ಕಟೀಲು ಕ್ಷೇತ್ರದಲ್ಲಿ ಸಭೆ ಸೇರಿದ ಗ್ರಾಮಸ್ಥರು ನಿಡ್ಡೋಡಿಯ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 4000 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರದ ವಿರುದ್ದ ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಪಕ್ಷಭೇದ ಮೆರೆತು ಎಲ್ಲರೂ ಗ್ರಾಮಸ್ಥರ ಹೋರಾಟಕ್ಕೆ ಬೆಂಬಲ ಸೂಚಿಸಿರುವುದರಿಂದ ಮುಂದಿನ ದಿನದಲ್ಲಿ ಈ ಹೋರಾಟ ತೀವ್ರ ರೂಪಕ್ಕೆ ಹೋಗುವ ಸಾಧ್ಯತೆ ಇಲ್ಲದಿಲ್ಲ. ಹೋರಾಟಕ್ಕೆ ಈಗಾಗಲೇ ಅರ್ಚಕರ ಸಮಿತಿ, ವಿವಿಧ ಸಂಘಟನೆಗಳು, ಅಂಗನವಾಡಿ ಸಂಸ್ಥೆಗಳು, ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.
ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಮಂಗಳವಾರ (ಆ 6) ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಸಮಾಲೋಚನೆ ಸಭೆ ಕರೆಯಲಾಗಿದೆ. ಉಷ್ಣ ವಿದ್ಯುತ್ ಸ್ಥಾವರದಿಂದಾಗುವ ಅನಾಹುತದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಈ ಸಭೆಯಲ್ಲಿ ಮಾಡಲಾಗುವುದು.
ನಿಡ್ಡೋಡಿ ಜಂಕ್ಷನಿನಲ್ಲಿ ಮಾತೃಭೂಮಿ ಹೋರಾಟ ಸಮಿತಿ ಭಾನುವಾರ (ಆ 4) ಉಪವಾಸ ಸತ್ಯಾಗ್ರಹ ನಡೆಸಿ, ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿಚಾರ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಸಾವಿರಾರು ಪೋಸ್ಟ್ ಕಾರ್ಡನ್ನು ಕಳುಹಿಸಿದ್ದರು.
ಮಂಗಳೂರಿನಿಂದ 35 ಕಿಲೋಮೀಟರ್ ದೂರದಲ್ಲಿರುವ ನಿಡ್ಡೋಡಿ ಗ್ರಾಮದಲ್ಲಿ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಸ್ಥಾಪಿಸಲು ಸರಕಾರ ಮುಂದಾಗಿದೆ. ಈ ಸ್ಥಾವರ ಸ್ಥಾಪನೆಗೆ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸ್ಥಾವರದಿಂದಾಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಿರ್ಧರಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅರಣ್ಯ ಸಚಿವ ರಮಾನಾಥ್ ರೈ ಭರವಸೆ ನೀಡಿದ್ದಾರೆ.
ಉಡುಪಿಯ ನಂದಿಕ್ಕೂರು ಉಷ್ಣ ವಿದ್ಯುತ್ ಸ್ಥಾವರ ಮತ್ತು ಮಂಗಳೂರಿನ ಎಂಆರ್ಪಿಎಲ್ ಘಟಕಗಳನ್ನು ಯಾವುದೇ ಮುಂದಾಲೋಚನೆಯಿಲ್ಲದೆ ಸ್ಥಾಪಿಸಲಾಗಿದ್ದು, ಇನ್ನು ನಿಡ್ಡೋಡಿ ಸ್ಥಾವರವನ್ನು ಸ್ಥಾಪಿಸಿ ಕರಾವಳಿಯ ಪರಿಸರವನ್ನು ಇನ್ನಷ್ಟು ಹಾಳು ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎನ್ನುವುದು ಪಕ್ಷಾತೀತವಾಗಿ ಎಲ್ಲರ ನಿರ್ಧಾರವಾಗಿದೆ.