ಮಳೆ ಕೊಯ್ಲು ಇಲ್ಲದ ಮನೆಗಳಿಗೆ ಬಂತು ನೋಟಿಸ್
ಸೋಮವಾರ ಬೆಂಗಳೂರು ಜಲಮಂಡಳಿ ಅಧಿಕಾರಿಗಳು 1,500 ಮನೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮಳೆ ನೀರು ಕೊಯ್ಲ ಪದ್ಧತಿ ಅಳವಡಿಸಿಕೊಳ್ಳದಿದ್ದರೆ ನೀರು ಮತ್ತು ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
2,400 ಚದರ ಅಡಿಗಳಿಗಿಂತ ಮೇಲ್ಪಟ್ಟು ವಿಸ್ತೀರ್ಣ ಹೊಂದಿರುವ ನಿವೇಶನಗಳಲ್ಲಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಆ.3ರ ಗಡುವನ್ನು ಜಲಮಂಡಳಿ ವಿಧಿಸಿ, ಜು.20ರಂದು ಆದೇಶ ಹೊರಡಿಸಿತ್ತು.
ಜಲಮಂಡಳಿ ಸೋಮವಾರ ನೀಡಿದ ಮಾಹಿತಿಯಂತೆ 21,964 ಮನೆಗಳಲ್ಲಿ ಇನ್ನೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿಲ್ಲ. ಪದ್ಧತಿ ಅಳವಡಿಕೆಗಾಗಿ ಒಟ್ಟು 68,531 ಮನೆಗಳನ್ನು ಜಲಮಂಡಳಿ ಗುರುತಿಸಿತ್ತು. (ಮಳೆ ನೀರು ಕೊಯ್ಲು ವ್ಯವಸ್ಥೆಗೆ ಅಂತಿಮ ಗಡುವು)
46,567 ಮನೆಗಳು ಮಾತ್ರ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡು ನೀರನ್ನು ಸಂಗ್ರಹಿಸುತ್ತಿದ್ದಾರೆ. ಹಂತಹಂತವಾಗಿ ಎಲ್ಲಾ ಮನೆಯ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲು ಜಲಮಂಡಳಿ ಮುಂದಾಗಿದೆ.
ನಿಗದಿಪಡಿಸಿದ ಅವಧಿಯಲ್ಲಿ ಮಳೆ ನೀರು ಕೊಯ್ಲ ವ್ಯವಸ್ಥೆ ಅಳವಡಿಸಿಕೊಳ್ಳದಿದ್ದರೆ, ಜಲಮಂಡಳಿ ಕಾಯ್ದೆ 2010ರ ಅನ್ವಯ ಕಟ್ಟಡಗಳಿಗೆ ನೀರಿನ ಸಂಪರ್ಕ ಸ್ಥಗಿತಗೊಳಿಸಲು ಅವಕಾಶವಿದೆ. ಆದ್ದರಿಂದ ನೋಟಿಸ್ ಜಾರಿಗೊಳಿಸಿರುವ ಮಂಡಳಿ ಈ ಕುರಿತ ಎಚ್ಚರಿಕೆಯನ್ನು ರವಾನಿಸಿದೆ.