108 ಆಂಬ್ಯುಲೆನ್ಸ್ ಸೇವೆಯ 194 ನೌಕರರು ವಜಾ
ಸೋಮವಾರ ಮಧ್ಯಾಹ್ನ ಆದೇಶ ಹೊರಡಿಸಿರುವ ಜಿವಿಕೆ ಫೌಂಡೇಷನ್, ಕೆಲಸಗಾರರು 24 ಗಂಟೆಗಳ ಗಡುವಿನೊಳಗೆ ಕೆಲಸಕ್ಕೆ ಹಾಜರಾಗದೆ ಇದ್ದುದ್ದರಿಂದ 194 ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದೆ. ಉಳಿದ ಕಾರ್ಮಿಕರಿಗೂ ರಾತ್ರಿ 8 ಗಂಟೆಯ ಅಂತಿಮ ಗಡುವು ವಿಧಿಸಿದೆ.
ರಾಜ್ಯದಲ್ಲಿರುವ ಸುಮಾರು 517 ಆಂಬುಲೆನ್ಸ್ ಗಳ ಕೀಯನ್ನು ಜಿವಿಕೆ ಸಂಸ್ಥೆಗೆ ಮರಳಿಸಿರುವ ಸುಮಾರು 2,500 ಚಾಲಕರು, ಸ್ಟಾಫ್ ನರ್ಸಗಳು ತಮ್ಮ ಸೇವೆ ಸ್ಥಗಿತಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಳೆದ ಎರಡು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸುಮಾರು 20 ನೌಕರರು ಅಸ್ವಸ್ಥಗೊಂಡು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದರೆ, ನೌಕರರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದ ಸಂಸ್ಥೆ 194 ನೌಕರರನ್ನು ಸೇವೆಯಿಂದ ವಜಾಗೊಳಿಸಿದೆ. ಈ ನೌಕರರಿಗೆ ಕೆಲಸಕ್ಕೆ ಹಾಜರಾಗಲು ಸಂಸ್ಥೆ 24 ಗಂಟೆಗಳ ಗಡುವು ನೀಡಿತ್ತು. ಇದನ್ನು ಮೀರಿದರೂ ನೌಕರರು ಕೆಲಸಕ್ಕೆ ಹಾಜರಾಗದೆ ಇದ್ದುದ್ದರಿಂದ ಅವರನ್ನು ವಜಾಗೊಳಿಸಲಾಗಿದೆ.
ಬೆದರಿಕೆಗೆ ಬಗ್ಗಲ್ಲ : ಜಿವಿಕೆ ಸಂಸ್ಥೆಯ ವಜಾದಂತಹ ಯಾವುದೇ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ರವೀಂದ್ರ ಹೇಳಿದ್ದಾರೆ. 2,500 ನೌಕರರನ್ನು ಬೇಕಾದರೂ ಸಂಸ್ಥೆ ವಜಾಗೊಳಿಸಲಿ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ಸೇವೆಗೆ ತೊಂದರೆಯಿಲ್ಲ : 108 ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯದಲ್ಲಿ ಅಂಬ್ಯುಲೆನ್ಸ್ ಸೇವೆಗೆ ತೊಂದರೆ ಆಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆಎಸ್ಆರ್ ಟಿಸಿ ಬಸ್ ಡ್ರೈವರ್ ಮತ್ತು ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಗಳನ್ನು ತುರ್ತು ಚಿಕಿತ್ಸೆ ಸೇವೆಗೆ ನಿಯೋಜಿಸಿದೆ. (ನೌಕರರ ಬೇಡಿಕೆಗಳೇನು)