ಗೊರೂರು ಹೇಮಾವತಿ ಜಲಾಶಯ ಕೈಬೀಸಿ ಕರೆಯುತಿದೆ
ಅರಕಲಗೂಡು, ಆ. 5 : ಕರುನಾಡಿನ ಜೀವನದಿಗಳಲ್ಲಿ ಒಂದಾಗಿರುವ ಕಾವೇರಿಯ ಉಪನದಿಗಳಲ್ಲಿ ಒಂದಾಗಿರುವ ಹೇಮಾವತಿ ನದಿಗೆ ಹಾಸನ ಜಿಲ್ಲೆಯ ಗೊರೂರಿನಲ್ಲಿ ಕಟ್ಟಲಾಗಿರುವ ಗೊರೂರು ಅಣೆಕಟ್ಟು (ಗೊರೂರು ಹೇಮಾವತಿ ಜಲಾಶಯ), ರಾಜ್ಯದ ಉಳಿದೆಲ್ಲ ಅಣೆಕಟ್ಟುಗಳಂತೆ ಮೈದುಂಬಿಕೊಂಡು ಕಂಗೊಳಿಸುತ್ತಿದ್ದಾಳೆ.
ಗೊರೂರು ಹೇಮಾವತಿ ಜಲಾಶಯದ ಬಳಿ ಭಾನುವಾರ ಲಕ್ಷ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂತು. ಕಳೆದ 2 ತಿಂಗಳಿನಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಜುಲೈ ತಿಂಗಳಲ್ಲೇ ಮೈದುಂಬಿದ್ದ ಹೇಮಾವತಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಹರಿಯ ಬಿಡಲಾಗುತ್ತಿದೆ.
ಕಳೆದ 30 ವರ್ಷಗಳ ಅಂತರದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣದ ನೀರು ಹರಿಯ ಬಿಡಲಾಗುತ್ತಿದೆ. ಜಲಾಶಯದ ಎಲ್ಲಾ ಕ್ರೆಸ್ಟ್ ಗೇಟ್ ಗಳಿಂದಲೂ ನೀರು ಹೊರಗೆ ದುಮ್ಮಿಕ್ಕುತ್ತಿದೆ. ಆ ರಭಸಕ್ಕೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜಲಧಾರೆ ಕಲಾಕೃತಿಯಂತೆ ಭಾಸವಾಗುತ್ತಿದೆ.
ಇಂಥದೊಂದು ಅದ್ಭುತ ರಮಣೀಯವಾದ ಜಲನರ್ತನದ ಸೌಂದರ್ಯವನ್ನು ಸವಿಯಲು ರಾಜ್ಯದ ಎಲ್ಲ ಪ್ರದೇಶಗಳಿಂದ, ಹಾಸನದಿಂದ 24 ಕಿ.ಮೀ. ದೂರದಲ್ಲಿರುವ ಗೊರೂರು ಹೇಮಾವತಿ ಜಲಾಶಯಕ್ಕೆ ಬರುತ್ತಿದ್ದಾರೆ. ಈ ದೃಶ್ಯವನ್ನು ಇಲ್ಲಿ ಚಿತ್ರಗಳಲ್ಲಿ ಹಿಡಿದಿಡಲಾಗಿದೆ. ಸಾಧ್ಯವಾದರೆ, ಈ ಶ್ರಾವಣ ಮಾಸದಲ್ಲಿ ನೀವೂ ಒಮ್ಮೆ ಗೊರೂರು ಹೇಮಾವತಿ ಜಲಾಶಯಕ್ಕೆ ಹೋಗಿಬನ್ನಿ.
ನೀರ ಬಿಂದುವಿನ ಅಮೃತ ಸಿಂಚನ
ಈ ನಡುವೆ ವರ್ಷಧಾರೆಯ ಸಿಂಚನ ಮತ್ತಷ್ಟು ಮೆರುಗು ತುಂಬುತ್ತಿದೆ. ಜಲಾಶಯದ ಬಳಿ ತಣ್ಣಗೆ ಬೀಸುವ ಗಾಳಿಗೆ ಅಲೆಯ ಹೊಡೆತ ಸಿಲುಕಿದಾಗ ಮಳೆಬಂದಂತೆ ಆಗುತ್ತಿದೆ. ನೀರ ಬಿಂದುವಿನ ಆ ಅಮೃತ ಸಿಂಚನಕ್ಕೆ ಪುಳಕಗೊಳ್ಳದವರು ಯಾರು ಹೇಳಿ?
ಹರಿದುಬರುತ್ತಿದೆ ಪ್ರವಾಸಿಗರ ಸುನಾಮಿ
ಈ ಸೌಂದರ್ಯವನ್ನು ಸವಿಯಲು ತಂಡೋಪ ತಂಡವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಭೋರ್ಗರೆತ ನೋಡಲು ಬಂದ ಜನಸಾಗರ
ಭಾನುವಾರ ಜಲಾಶಯದ ಬಳಿಗೆ ಲಕ್ಷ ಸಂಖ್ಯೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜನಸಾಗರವೇ ಹರಿದು ಬಂದಿತ್ತು.
ಹೆಚ್ಚಾದ ವಾಹನ ದಟ್ಟಣೆ
ಜನಸಾಗರದ ನಡುವೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡು ಗಂಟೆಗಟ್ಟಲೆ ಹೇಮಾವತಿ ಹೊಳೆಯ ಸೇತುವೆ ಮೇಲೆ ಕಾಯುವ ಪರಿಸ್ಥಿತಿ ಉಂಟಾಗಿತ್ತು. ಸಾಕಷ್ಟು ಸಂಖ್ಯೆಯ ಪೋಲೀಸ್ ವ್ಯವಸ್ಥೆ ಇಲ್ಲದೆ ಭದ್ರತೆಗೂ ತೊಡಕುಂಟಾಗಿತ್ತಲ್ಲದೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಜಲಾಶಯದ ಮೇಲ್ಭಾಗಕ್ಕೆ ಹೋಗಲು ಕೆಲವರ ಯತ್ನ
ಜಲಾಶಯಕ್ಕೆ ಭೇಟಿ ನೀಡುತ್ತಿದ್ದ ಜನರು ಪ್ರಭಾವಿಗಳ ಹೆಸರು ಹೇಳಿಕೊಂಡು ಜಲಾಶಯದ ಮೇಲ್ಭಾಗಕ್ಕೆ ಹೋಗಲು ಯತ್ನಿಸುತ್ತಿದ್ದರಾದರೂ ಅದಕ್ಕೆ ಅವಕಾಶವಾಗದಂತೆ ಪೊಲೀಸರು ನಿರ್ಬಂಧಿಸಿದ್ದರು.
ಎಲ್ಲ ನಿಯಮಗಳ ಉಲ್ಲಂಘನೆ
ಜಲಾಶಯದ ಇಂಜಿನಿಯರುಗಳ ಜೀಪು ಕಾರುಗಳಲ್ಲಿ ತಮ್ಮ ಸ್ನೇಹಿತರು, ಬಂಧುಗಳನ್ನು ನಿರಾತಂಕವಾಗಿ ಜಲಾಶಯದ ಮೇಲ್ಭಾಗಕ್ಕೆ ಸರ್ಕಾರಿ ವಾಹನದಲ್ಲಿ ಕರೆದೊಯ್ಯುವ ಮೂಲಕ ನಿಯಮವನ್ನು ಉಲ್ಲಂಘಿಸಲಾಗುತ್ತಿತ್ತು.
ಜನಸಾಗರ ತಡೆಯಲು ಪೊಲೀಸರು ಅಸಹಾಯಕ
ಇದರಿಂದಾಗಿ ಬೇಸತ್ತ ಕೆಲವು ಪ್ರವಾಸಿಗರು ಹಾಸನ ರಸ್ತೆಯ ಬಳಿ ಹಾದು ಹೋಗಿರುವ ಕಾಲುವೆ ಬಳಿಯ ದ್ವಾರದ ಮೂಲಕ ಅಪಾಯಕಾರಿ ಜಾಗದಲ್ಲಿ ಅಕ್ರಮವಾಗಿ ಜಲಾಶಯವನ್ನು ಪ್ರವೇಶಿಸುತ್ತಿದ್ದರೂ ಅದನ್ನು ತಡೆಯುವಲ್ಲಿ ಬೆರಳೆಣಿಕೆಯ ಪೊಲೀಸರು ಅಸಹಾಯಕರಾಗಿದ್ದರು.
ಚನ್ನರಾಯಪಟ್ಟಣದಿಂದ ತಲುಪಬಹುದು
ಬೆಂಗಳೂರಿನಿಂದ 193 ಕಿ.ಮೀ. ದೂರದಲ್ಲಿರುವ ಗೊರೂರು ಹೇಮಾವತಿ ಜಲಾಶಯಕ್ಕೆ ಕುಣಿಗಲ್, ಚನ್ನರಾಯಪಟ್ಟಣದ ಮುಖಾಂತರ ಹೋಗಬಹುದು. ಸಾಕಷ್ಟು ಬಸ್ಸುಗಳ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಚನ್ನರಾಯಪಟ್ಟಣದಿಂದ ಗೊರೂರು ಡ್ಯಾಂ ಅನ್ನು ತಲುಪಬಹುದು. ಆದರೆ ಒಂದ್ ರಿಕ್ವೆಸ್ಟು, ದಯವಿಟ್ಟು ಗುಂಡು, ತುಂಡು ತೆಗೆದುಕೊಂಡು ಹೋಗಿ ವಾತಾವರಣವನ್ನು ಹಾಳು ಮಾಡಬೇಡಿ.
ಮಸ್ತ್ ಮಸ್ತ್ ಪಿಕ್ನಿಕ್ ಸ್ಟಾಟ್
ಹಾಸನದಿಂದ 24 ಕಿ.ಮೀ. ದೂರದಲ್ಲಿರುವ ಗೊರೂರು ಹೇಮಾವತಿ ಜಲಾಶಯಕ್ಕೆ ಖಾಸಗಿ ವಾಹನ ಮುಖಾಂತರವೂ ತಲುಪಬಹುದು. ಇದೊಂದು ಪಿಕ್ನಿಕ್ ಸ್ಪಾಟ್ ಆಗಿದ್ದು, ಪರವಸುದೇವ ಮತ್ತು ಯೋಗಾನರಸಿಂಹ ದೇವಸ್ಥಾನಗಳೂ ಇಲ್ಲಿನ ಆಕರ್ಷಣೆಗಳಲ್ಲೊಂದಾಗಿವೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಇದೇ ಪ್ರದೇಶದವರು.
ತಾಯಿ ಕಾವೇರಿಯ ಉಪನದಿ
ಗೋರೂರು ಅಣೆಕಟ್ಟಿನ ಎತ್ತರ 146 ಅಡಿ ಇದೆ. ಚಿಕ್ಕಮಗಳೂರಲ್ಲಿ ಹುಟ್ಟಿರುವ ಹೇಮಾವತಿ ನದಿ ಹಾಸನ ಮತ್ತು ಮೈಸೂರು ಜಿಲ್ಲೆಗಳ ಮುಖಾಂತರ ಸಾಗಿ ಕೃಷ್ಣರಾಜಸಾಗರದ ಬಳಿ ಕಾವೇರಿಯನ್ನು ಸೇರುತ್ತದೆ.
[ಲಿಂಗನಮಕ್ಕಿ ಅಣೆಕಟ್ಟಿನ ವಿಹಂಗಮ ನೋಟ] [ಕೊಡಗಿನ ಮಳೆಯ ಚಿತ್ರಗಳು]