ಮಂಡ್ಯ : ಬೀದಿನಾಯಿಗಳ ದಾಳಿಗೆ ಬಾಲಕ ಬಲಿ
ಮಳವಳ್ಳಿಯ ಹೊಂಬೇಗೌಡನದೊಡ್ಡಿಯ ಕೆಂಚ ಎಂಬುವವರ ಪುತ್ರ ಹನುಮಂತ(8) ಮೃತ ಬಾಲಕ. ಭಾನುವಾರ ಮನೆಯ ಹಿಂದಿನ ತೋಟದಲ್ಲಿ ಈತ ಆಟವಾಡುತ್ತಿದ್ದ, ಆಗ ಅಲ್ಲೇ ಪಕ್ಕದಲ್ಲಿದ್ದ ಇವರ ಮನೆಗೆ ಸೇರಿದ ಮೇಕೆಗಳ ಮೇಲೆ ಐದು ಬೀದಿ ನಾಯಿಗಳು ದಾಳಿ ನಡೆಸಿದವು.
ನಾಯಿಯ ದಾಳಿ ತಡೆಯಲು ಹೋದ ಹನುಮಂತ ಅವುಗಳ ಮೇಲೆ ಕಲ್ಲುಗಳನ್ನು ತೂರಿದ್ದಾನೆ. ಇದರಿಂದ ಕೆರಳಿದ ನಾಯಿಗಳು ಆತನ ಮೇಲೆಯೇ ತಿರುಗಿಬಿದ್ದು, ಕಚ್ಚಿ ತೀವ್ರವಾಗಿ ಗಾಯಗೊಳಿಸಿದವು. ತಂದೆ-ತಾಯಿ ಬಂದು ಬಿಡಿಸುವಷ್ಟರಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ.
ಬಾಲಕನ ತಲೆಯ ಮೇಲ್ಬಾಗವನ್ನು ನಾಯಿಗಳು ಕಚ್ಚಿ ತಿಂದಿದ್ದವು. ತಕ್ಷಣ ಬಾಲಕನನ್ನು ಭಾರತೀನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ.
ಬೀದಿನಾಯಿಗಳ ನಿಯಂತ್ರಣ ಮಾಡದ ಗ್ರಾಮ ಪಂಚಾಯಿತಿಯೇ ಬಾಲಕನ ಸಾವಿಗೆ ಕಾರಣ. ಬಾಲಕನ ಮನೆಯವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.
ಗ್ರಾಮಕ್ಕೆ ಆಗಮಿಸಿದ ತಹಸೀಲ್ದಾರ್, ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ನೀಡಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಎರಡನೇ ಪ್ರರಕಣ : ಭಾರತೀನಗರ ಸಮೀಪದ ಹಣ್ಣೂರು ಗ್ರಾಮದಲ್ಲೂ 15 ದಿನಗಳ ಹಿಂದೆ ಹುಚ್ಚು ನಾಯಿ ಇಬ್ಬರು ಬಾಲಕರು ಸೇರಿದಂತೆ ಐವರ ಮೇಲೆ ದಾಳಿ ನಡೆಸಿತ್ತು. ಈ ಘಟನೆ ನಂತರವೂ ಗ್ರಾಮ ಪಂಚಾಯಿತಿ ಬೀದಿ ನಾಯಿಗಳ ಹಾವಳಿ ತಡೆಯಲು ಕ್ರಮ ಕೈಗೊಂಡಿರಲಿಲ್ಲ.