ಪತ್ನಿ ಪ್ರೀತಿಸುತ್ತಿಲ್ಲ ಎಂದು ನೇಣಿಗೆ ಶರಣಾದ ಟೆಕ್ಕಿ
ಕೋಲಾರ ಮೂಲದ 28 ವರ್ಷದ ಟೆಕ್ಕಿ ದೀಪಕ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಸುಮಾರು 35 ದಿನಗಳ ಹಿಂದಷ್ಟೇ ದೀಪಕ್ ಅವರ ಮದುವೆಯಾಗಿದ್ದರು. ಎರಡು ಮನೆಯವರ ಕಡೆ ಒಪ್ಪಿಗೆ ನಂತರ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಇತ್ತೀಚೆಗೆ ಪತ್ನಿ ತನ್ನನ್ನು ಸರಿಯಾಗಿ ಪ್ರೀತಿಸುತ್ತಿಲ್ಲ ಎಂದು ಮನನೊಂದು ದೀಪಕ್ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮುಳುವಾದ ಹಳೆ ಪ್ರೇಮ: ಕೋಲಾರ ಮೂಲದ ದೀಪಕ್ ಉತ್ತಮ ಇಂಜಿನಿಯರ್ ಆಗಿದ್ದು ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತನ್ನ ಕಂಪನಿ ಕಡೆಯಿಂದ ಡೆನ್ಮಾರ್ಕ್ ದೇಶಕ್ಕೂ ಹೋಗಿ ಬಂದಿದ್ದರು. ಮದುವೆಯಾಗಿ ಒಂದು ತಿಂಗಳು ಹಾಗೂ ಹೀಗೂ ಪತ್ನಿ ಅನುಷಾ ಜೊತೆ ಚೆನ್ನಾಗಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ.
ಕೋಲಾರದ ಮೂಲದವರ ಈ ಇಬ್ಬರ ಮದುವೆಗೆ ಎರಡು ಕಡೆ ಮನೆಯವರು ಒಪ್ಪಿದ್ದರು. ಹತ್ತು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ದೀಪಕ್ ಗೆ ಮದುವೆಗೂ ಮುನ್ನ ಬೇರೊಬ್ಬ ಹುಡುಗಿಯನ್ನು ಪ್ರೀತಿಸಿದ್ದ, ಈ ವಿಷಯವನ್ನು ಭಾವಿ ಪತ್ನಿ ಅನುಷಾಗೂ ಹೇಳಿದ್ದ, ಆಕೆ ಪಾಸ್ಟ್ ಇಸ್ ಪಾಸ್ಟ್ , ಹೊಸ ಜೀವನ ಕಟ್ಟೋಣ ಚಿಂತಿಸಬೇಡಿ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ.
ಆದರೆ, ಮದುವೆಯಾದ ಬಳಿಕ ಅನುಷಾ ಪದೇ ಪದೇ ಹಳೆ ಪ್ರೇಮ ಪ್ರಸ್ತಾಪಿಸಿ ದೀಪಕ್ ರನ್ನು ಕಿಚಾಯಿಸಿದ್ದಾರೆ. ಹಳೆ ಪ್ರಿಯತಮೆ ಜೊತೆ ದೈಹಿಕವಾಗಿ ಸಂಪರ್ಕ ಹೊಂದಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಅನುಷಾ ಅವರು ದೀಪಕ್ ಅವರನ್ನು ಅನುಮಾನಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ದೀಪಕ್ ನಂಬಿಕೆ ಇಲ್ಲದ ಮೇಲೆ ದಾಂಪತ್ಯಕ್ಕೆ ಬೆಲೆ ಏನಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಸ್ತಾರವಾಗಿ ಡೆತ್ ನೋಟ್ ನಲ್ಲಿ ಬರೆದಿರುವ ದೀಪಕ್, ಕಡೆಗೆ ನನ್ನ ಸಾವಿಗೆ ನಾನೇ ಕಾರಣ ಎಂದೂ ಕೂಡಾ ಸೇರಿಸಿದ್ದಾರೆ.
ಸಾಯುವುದಕ್ಕೂ ಮುನ್ನ ಮನೆಯಲ್ಲೇ ಇದ್ದ ಪತ್ನಿ ಅನುಷಾರನ್ನು ಕೋಣೆಯಲ್ಲಿ ಕೂಡಿ ಹಾಕಿ ಮತ್ತೊಂದು ಕೋಣೆಗೆ ತೆರಳಿದ ದೀಪಕ್ ಬೆಳಗ್ಗೆ 11 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಅನುಷಾ ಅವರು ಕಿಟಕಿ ಒಡೆದು ಪಕ್ಕದ ಮನೆಯವರ ಸಹಾಯ ಬೇಡಿದ್ದಾರೆ. ನೆರೆ ಮನೆಯವರು ಬಂದು ನೆರವು ನೀಡುವಷ್ಟರಲ್ಲಿ ದೀಪಕ್ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ತಿಳಿದು ಬಂದಿದೆ. ದೊಡ್ಡ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.