ರೈತರ ನೆರವಿಗೆ ಬರಲು ಪೊಟ್ಯಾಟೋ ಕ್ಲಬ್ ಆಗ್ರಹ
ಅರಕಲಗೂಡು, ಆ. 3 : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಅತಿವೃಷ್ಟಿಗೆ ತಾಲೂಕಿನಾದ್ಯಂತ ಬೆಳೆಗಳು ಹಾಳಾಗಿದ್ದು ಜನ-ಜಾನುವಾರುಗಳು ಸಹ ಸಂಕಷ್ಠಕ್ಕೆ ಸಿಲುಕಿವೆ ಆದ್ದರಿಂದ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್ ಯೋಗರಮೇಶ್ ಆಗ್ರಹಿಸಿದ್ದಾರೆ.
ಪೊಟ್ಯಾಟೋ ಕ್ಲಬ್ ಮತ್ತು ರೈತ ಸಂಘದ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಶೇ.80ರಷ್ಟು ಬೆಳೆ ನಷ್ಟವಾಗಿದೆ ಹಾಗೂ ಜಾನುವಾರುಗಳು ತೊಂದರೆಗೆ ಸಿಲುಕಿದೆ. ತಾಲೂಕಿನಾದ್ಯಂತ ಮನೆಗಳು ಕುಸಿದಿವೆ ಎಂದು ವಿವರಿಸಿದರು.
ಆದರೆ ತಾಲೂಕು ಆಡಳಿತ ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪರಿಹಾರೋಪಾಯಗಳನ್ನು ರೂಪಿಸದೇ ನಿರ್ಲಕ್ಷ್ಯ ವಹಿಸಿದೆ. ಆಡಳಿತ ಶಾಹಿ ಸ್ವಾರ್ಥದ ಉದ್ದೇಶದಿಂದ ರೈತರ ಹಿತಾಸಕ್ತಿಯನ್ನು ಮರೆತಿದ್ದಾರೆ. ಆದ್ದರಿಂದ ತಕ್ಷಣವೇ ತಾಲೂಕು ಆಡಳಿತ ಎಚ್ಚೆತ್ತು ಕೊಳ್ಳಬೇಕು ಮತ್ತು ಸರ್ಕಾರಕ್ಕೆ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಸಲ್ಲಿಸಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ, ಸಮೀಕ್ಷೆ ವೇಳೆ ರೈತರ ಪಹಣಿಯ ಆಣಿವಾರು ಕಾಲಂನಲ್ಲಿ ನಾಲ್ಕಾಣಿ ಮತ್ತು ಅದಕ್ಕಿಂತ ಕಡಿಮೆ ನಮೂದಿಸಲು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಿಖಿತ ಆದೇಶ ನೀಡಿ ಆಣಿವಾರು ಕಾಲಂನಲ್ಲಿ ನಾಲ್ಕಾಣೆಯನ್ನು ನಮೂದಿಸಿ ರೈತರ ಸಂಕಷ್ಟಕ್ಕೆ ನೆರವಾಗಬೇಕೆಂದು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಶಂಭುನಾಥಪುರದಲ್ಲಿ 5 ಮನೆಗಳು, ದೊಡ್ಡಮಗ್ಗೆಯಲ್ಲಿ 1, ಹುಲಿಕಲ್ ನಲ್ಲಿ 1, ಯಗಟಿ ಗ್ರಾಮದಲ್ಲಿ 1, ಮೂಡನಪಾಳ್ಯದಲ್ಲಿ 1, ಮಲ್ಲಿಪಟ್ಟಣದಲ್ಲಿ 1, ಹೆಣ್ಣೂರು ಕೊಂಗಳಲೆಯಲ್ಲಿ 1, ಲಿಂಗದಹಳ್ಳಿಯಲ್ಲಿ 1, ಹಿಪ್ಪಲಿ ಯಲ್ಲಿ 1, ಹೊನಗಾನಹಳ್ಳಿಯಲ್ಲಿ 3, ಸೀಗೋಡು ಗ್ರಾಮದಲ್ಲಿ 1, ಸಿ ಅಬ್ಬೂರು ಗ್ರಾಮದಲ್ಲಿ 1, ತರಿಗಳಲೆ ಗ್ರಾಮದಲ್ಲಿ 1 ವಾಸದ ಮನೆಗಳು ಕುಸಿದಿವೆ.
ಈ ಸಂದರ್ಭದಲ್ಲಿ ರೈತ ಸಂಘದ ಹೊಂಬೇಗೌಡ, ಜಗದೀಶ, ಕ್ಲಬ್ ನ ಎಚ್ ಮಾದೇಶ್, ಪ.ಪಂ. ಸದಸ್ಯ ವಾಟಾಳ್ ರಮೇಶ್, ಶಶಿಕುಮಾರ್, ಟೆಂಪೋ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.