ಕರ್ನಾಟಕ ರಾಜ್ಯ ವಿಭಜನೆಗೂ ಶುರುವಾಯಿತು ಕೂಗು
ಮಂಗಳೂರು, ಆ 1: ಆಂಧ್ರ ವಿಭಜನೆಯ ನಂತರ ದೇಶದ ಇತರ ಭಾಗಗಳಲ್ಲೂ ಪ್ರತ್ಯೇಕ ರಾಜ್ಯದ ರಚನೆಗೆ ಕೂಗು ಕೇಳಲಾರಂಭಿಸಿದೆ. ಕರ್ನಾಟಕವನ್ನು ವಿಭಜಿಸಿ 'ತುಳುನಾಡು' ರಾಜ್ಯ ರಚನೆಯ ಕೂಗಿಗೆ ಮತ್ತೆ ಚಾಲನೆ ಸಿಕ್ಕಿದೆ.
ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸಿ ಸಂಘಟಿತ ಪ್ರಯತ್ನಕ್ಕೆ ಸಮಿತಿ ನಿರ್ಧರಿಸಿದೆ.
"ಯಾವುದೇ ಸರಕಾರ ಬಂದರೂ ಕರಾವಳಿ ಕರ್ನಾಟಕದ ಜನರ ಭಾವನೆಯ ವಿರುದ್ದ ನಡೆದುಕೊಳ್ಳುತ್ತಿದೆ. ನಮ್ಮ ಭಾಗದ ಜನರು ಸಜ್ಜನರು. ಈ ಭಾಗದ ಜನರ ಆಶಯಕ್ಕೆ ವಿರುದ್ದವಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎತ್ತಿನಹೊಳೆ, ನೇತ್ರಾವತಿ ನದಿ ತಿರುವು ಯೋಜನೆ ಮುಂತಾದ ಪ್ರಮುಖ ಯೋಜನೆಗಳಿಗೆ ನಮ್ಮ ಭಾಗದ ಜನರ ತೀವ್ರ ವಿರೋಧವಿದೆ. ಆದರೆ ಸರಕಾರ ನಮ್ಮ ಕೋರಿಕೆಗಳಿಗೆ ಸೊಪ್ಪು ಹಾಕುತ್ತಿಲ್ಲ" ಎಂದು ಹರಿಕೃಷ್ಣ ಪುನರೂರು ದೂರಿದ್ದಾರೆ.
"ಪ್ರತ್ಯೇಕ ತುಳುನಾಡು ರಾಜ್ಯದ ಹೋರಾಟ ತೆಲಂಗಾಣ ಹೋರಾಟಕ್ಕಿಂತ ಹಳೆಯದು. ಕರಾವಳಿ ಭಾಗದ ಜನರನ್ನು ಮತ್ತು ಈ ಭಾಗದ ಅಭಿವೃದ್ದಿ ಕೆಲಸವನ್ನು ಸರಕಾರ ನಿರ್ಲಕ್ಷಿಸುತ್ತದೆ. ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಅಭಿವೃದ್ದಿ ವಿಚಾರದಲ್ಲಿ ಕರಾವಳಿಗೆ ಸೂಕ್ತ ಪ್ರಾನಿನಿಧ್ಯ ಸಿಗುತ್ತಿಲ್ಲ" ಎಂದು ಸಮಿತಿಯ ಇನ್ನೋರ್ವ ಸದಸ್ಯ ಅಣ್ಣಯ್ಯ ಕುಲಾಲ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಕರಾವಳಿಯ ಯಾವ ಯಾವ ಭಾಗ ತುಳುನಾಡಿಗೆ ಬೇಡಿಕೆ ಮುಂದೆ ಓದಿ..
ಕರಾವಳಿಯ ಯಾವ ಯಾವ ಭಾಗ ತುಳುನಾಡಿಗೆ ಬೇಡಿಕೆ
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಕೇರಳದ ಕಾಸರಗೋಡಿನ ಉತ್ತರದಿಂದ ಚಂದ್ರಗಿರಿ ನದಿಯ ವರೆಗಿನ ಭಾಗವನ್ನು ಪ್ರತ್ಯೇಕಿಸಿ ತುಳುನಾಡು ರಾಜ್ಯ ರಚನೆಯಾಗ ಬೇಕೆನ್ನುವುದು ಸುಮಾರು ಎರಡು ದಶಕಗಳಿಂದ ಅಂದರೆ ಸುಮಾರು 1990ರ ಇಸವಿಯಿಂದ ನಡೆದುಕೊಂಡು ಬರುತ್ತಿರುವ ಹೋರಾಟ. ಆದರೆ ಈ ಬೇಡಿಕೆ ಇದುವರೆಗೆ ಒಂದು ಸಣ್ಣ ಕೂಗಾಗಿ ಮಾತ್ರ ಮಾರ್ಧನಿಸಿತ್ತು.
ಮುಂದಿನ ಹೆಜ್ಜೆ ಹೇಗೆ?
ಅನಿಲ ಇಲ್ಲಿ ಉತ್ಪತ್ತಿಯಾದರೂ ನಾವು ಎಲ್ಲರ ಹಾಗೇ ಬೆಲೆ ತೆರ ಬೇಕಾಗುತ್ತದೆ. ಈ ಭಾಗದ ಕೆಲಸಗಳಿಗೆ ಸರಕಾರದಿಂದ ಸೂಕ್ತ ಅನುದಾನ ಮರೀಚಿಕೆಯಾಗಿದೆ. ಈ ತಿಂಗಳ ಏಳರಂದು ಮೂರು ಜಿಲ್ಲೆಗಳ ಸಂಘ, ಸಂಸ್ಥೆಗಳನ್ನು ಕರೆದು ಮುಂದಿನ ಹೆಜ್ಜೆ ಇಡಲಿದ್ದೇವೆ. ಇನ್ನು ಮುಂದೆ ಇದು ಗಂಭೀರ ಹೋರಾಟವಾಗಲಿದೆ ಎಂದು ಕುಲಾಲ್ ಹೇಳಿದ್ದಾರೆ.
ಕೊಡಗಿನವರೂ ಬೇಡಿಕೆ ಸಲ್ಲಿಸಿದ್ದರು
ತುಳುನಾಡಿನಂತೆ ಕೊಡಗನ್ನೂ ಕರ್ನಾಟಕದಿಂದ ಪ್ರತ್ಯೇಕಿಸಿ ಹೊಸ ರಾಜ್ಯವನ್ನಾಗಿ ಮಾಡಬೇಕೆಂದು ಸಣ್ಣ ಹಂತದ ಹೋರಾಟ ನಡೆದಿತ್ತು. ಸಮಾಜದ ಹಿತಚಿಂತಕರು, ಬುದ್ದಿಜೀವಿಗಳ ವಿರೋಧ ಮತ್ತು ಕೊಡಗು ಭಾಗದ ರಾಜಕೀಯ ಮುಖಂಡರು ಈ ಬೇಡಿಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಇದ್ದುದ್ದರಿಂದ ಹೊಸ ರಾಜ್ಯದ ಬೇಡಿಕೆಯ ಬಗ್ಗೆ ಸದ್ಯ ಏನೂ ಸುದ್ದಿಯಿಲ್ಲ.
ದಕ್ಷಿಣಕನ್ನಡ ಜಿಲ್ಲೆಗೆ ತುಳುನಾಡು ಎಂದು ನಾಮಕರಣ
ದಕ್ಷಿಣಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯೆಂದು ಮರು ನಾಮಕರಣ ಮಾಡಲು ತುಳುನಾಡು ಜಿಲ್ಲೆಯೆಂದು ನಾಮಕರಣ ಮಾಡಿ ಎಂದು ಅಖಿಲ ಭಾರತ ತುಳು ಒಕ್ಕೂಟ ಆಗ್ರಹಿಸಿತ್ತು. ದಕ್ಷಿಣಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆಯೆಂದು ನಾಮಕರಣ ಮಾಡುವ ಇಂಗಿತ ವ್ಯಕ್ತವಾದ ಹಿನ್ನಲೆಯಲ್ಲಿ ತುಳು ಒಕ್ಕೂಟ ಈ ಮಾತನ್ನು ಹೇಳಿತ್ತು.
ದೇಶದ ಇತರೆಡೆಯೂ ಕೂಗು
ಉತ್ತರಪ್ರದೇಶವನ್ನು ವಿಭಜಿಸಿ ನಾಲ್ಕು ರಾಜ್ಯವನ್ನಾಗಿ ಮಾಡಬೇಕೆಂದು ಮಾಯಾವತಿ ಆಗ್ರಹಿಸಿದ್ದರು. ಬೋಡೋ ಲ್ಯಾಂಡ್, ಗೂರ್ಖಾ ಲ್ಯಾಂಡ್, ಹರಿತ್ ಪ್ರದೇಶ್, ಬುಂದೇಲ್ ಖಾಂಡ್,ವಿದರ್ಭ ರಾಜ್ಯಕ್ಕೂ ಬೇಡಿಕೆ ಆರಂಭವಾಗಿದೆ. ಅದರಂತೆ ತುಳುನಾಡು ರಾಜ್ಯದ ಬಗ್ಗೆಯೂ ಕೂಗು ಆರಂಭವಾಗಿದೆ.