ಮಂಗಳೂರು ಪೋರನ ಈ ಸಾಧನೆಗೆ ಶಹಬ್ಬಾಸ್ ಅನ್ನಿ
ಮಂಗಳೂರು, ಆ 1: ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ಭೂಮಿ ಮೇಲೆ ಬಂಡಿ ಹೋಗದು ಎನ್ನುವುದು ಕನ್ನಡದ ಒಂದು ಹಳೆಯ ಪ್ರಸಿದ್ದ ಹಾಡು. ಆದರೆ ಮಂಗಳೂರಿನ ಈ ಹುಡುಗ ಈ ಹಾಡಿನ ಸಾಹಿತ್ಯವನ್ನು ಮೀರಿಸುವಂತ ಹೊಸ ಸಾಧನೆಯನ್ನು ಮಾಡಿದ್ದಾನೆ.
ಈ ಹುಡುಗನ ನಿರಂತರ ಆರು ತಿಂಗಳ ಪರಿಶ್ರಮ ಫಲ ನೀಡಿದೆ. ಹತ್ತನೇ ತರಗತಯಲ್ಲಿ ಓದುತ್ತಿರುವ ಈ ಹುಡುಗ ನೀರಿನ ಮೇಲೆ ಚಲಿಸುವ ನೂತನ ಸೈಕಲನ್ನು ತಯಾರಿಸಿದ್ದಾನೆ.
ಈತನ ಹೆಸರು ಅಹಮದ್ ರಿಜಾವುದ್ದೀನ್, ಈತ ಬೋಳಾರದ ಇನ್ಫೆಂಟ್ ಜೀಸಸ್ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ. ತನ್ನ ಸ್ನೇಹಿತರ ಜೊತೆಗೂಡಿ ನೆರೆ ಮುಂತಾದ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ಮಿತ ಬಜೆಟಿನ ಸೈಕಲನ್ನು ತಯಾರಿಸಿದ್ದೇವೆ ಎನ್ನುತ್ತಾನೆ ಈ ಹುಡುಗ.
ಬಾಲ್ಯದ ದಿನಗಳಲ್ಲಿ ಆಟವಾಡಲು ಸ್ನೇಹಿತರ ಜೊತೆ ಹೋಗುತ್ತಿದ್ದಾಗ ಮಳೆ ಬಂದ ಸಂದರ್ಭಗಳಲ್ಲಿ ಆಟವಾಡಲಾಗದೆ ನಿರಾಶೆಯಿಂದ ಮನೆಗೆ ವಾಪಾಸ್ ಹೋಗುತ್ತಿದ್ದೆ. ನೆರೆಪ್ರವಾಹ ಬಂದಾಗ ಗಾಳಿ ತುಂಬಿರುವ ಟ್ಯೂಬ್ ಮೂಲಕ ಜನ ದಡ ಸೇರುತ್ತಿದ್ದರು ಎಂದು ನನ್ನ ತಂದೆ ನನಗೆ ಬಹಳಷ್ಟು ಬಾರಿ ಹೇಳಿದ್ದರು. ಅದನ್ನೇ ತಲೆಯಲ್ಲಿ ಇಟ್ಟುಕೊಂಡು ನನಗೆ ಈ ಸಾಧನೆ ಮಾಡಲು ಪ್ರೇರಣೆಯಾಯಿತು ಎನ್ನುತ್ತಾನೆ ರಿಜಾವುದ್ದೀನ್.
ತನ್ನ ಸಾಧನೆಯ ಬಗ್ಗೆ ರಿಜಾವುದ್ದೀನ್ ವಿವರಿಸಿದ್ದು ಹೇಗೆ, ಎರಡು ಟ್ಯೂಬಿಗೆ ಗಾಳಿ ತುಂಬಿಸಿ, ಆ ಎರಡೂ ಟ್ಯೂಬನ್ನು ಕಬ್ಬಿಣದ ರಾಡಿನ ಮೂಲಕ ಜೋಡಿಸಲಾಗಿದೆ. ನಂತರ ಸೈಕಲ್ ಜೊತೆ ನೀರಿಗಿಳಿದರೆ ಪೆಡಲ್ ಮಾಡುತ್ತಾ ಸಾಗಿದರೆ ಸೈಕಲ್ ಮುಂದಕ್ಕೆ ಚಲಿಸುತ್ತದೆ.
ನಾವು ಹಿಮ್ಮುಖವಾಗಿ ಪೆಡಲ್ ಮಾಡಿದರೆ ಸೈಕಲ್ ಹಿಂದಕ್ಕೆ ಚಲಿಸುತ್ತದೆ. ಸೈಕಲ್ ಮುಳುಗದಂತೆ ತಡೆಯಲು ಎ ಮಾದರಿಯಲ್ಲಿ ಫ್ರೇಂ ಒಂದನ್ನು ಬಳಸಿಕೊಂಡಿದ್ದೇನೆ. ಪೆಲ್ಟನ್ ವೀಲನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.
ಇದು ಸೈಕಲ್ ಎರಡೂ ಕಡೆ ಚಲಿಸಲು ಅನುಕೂಲವಾಗುತ್ತದೆ. ಸೈಕಲ್ ಎಡಕ್ಕೆ ಮತ್ತು ಬಲಕ್ಕೆ ಸಂಚರಿಸಲು ಡಿಸ್ಕ್ವೀಲ್ ಎನ್ನುವ ಉಪಕರಣವನ್ನು ಬಳಸಿಕೊಂಡಿದ್ದೇನೆ, ಹಾಗೂ ರಾತ್ರಿ ಹೊತ್ತು ಸಂಚರಿಸಲು ಬೇಕಾಗಿರುವ ಡೈನಮೋವನ್ನು ಅಳವಡಿಸಿದ್ದೇವೆ ಎನ್ನುತ್ತಾನೆ ರಿಜಾವುದ್ದೀನ್.
ಪಿಲಿಕುಳದಲ್ಲಿ ನಡೆದ ವಿದ್ಯಾರ್ಥಿಗಳಿಗಾಗಿ ನೀಡುವ ಇನ್ ಫ್ಯಾಂಟ್ ಅವಾರ್ಡ್ ಮಾದರಿ ವಸ್ತು ಪ್ರದರ್ಶನದಲ್ಲಿ ಈ ಸೈಕಲ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ ಎನ್ನುವುದು ರಿಜಾವುದ್ದೀನಿಗಾದ ಇನ್ನೊಂದು ಸಂತಸದ ವಿಚಾರ.