ಬೆಳಗಾವಿ : ಪಂಜರದಲ್ಲಿ ಬಂಧಿಯಾಗಿದ್ದ ವ್ಯಕ್ತಿ ರಕ್ಷಣೆ
ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಪ್ರಕಾಶ್ ಬೆಳವಡಿ (60) ಎಂಬುವವರನ್ನು ಇಬ್ಬರು ಮಕ್ಕಳು ಕಳೆದ ಏಳು ವರ್ಷಗಳಿಂದ ಕಾಲಿಗೆ ಸರಪಳಿ ಹಾಕಿ, ಪಂಜರದಲ್ಲಿ ಕೂಡಿಹಾಕಿದ್ದರು. ಸ್ಥಳೀಯರಿಂದ ಮಾಹಿತಿ ಪಡೆದ ಸವದತ್ತಿ ಪೊಲೀಸರು ಬುಧವಾರ ಪ್ರಕಾಶ್ ಅವರನ್ನು ಬಂಧಮುಕ್ತಗೊಳಿಸಿದ್ದಾರೆ.
ಪಂಜರದಲ್ಲಿದ್ದ ಕಾರಣ ಪ್ರಕಾಶ್ ಅವರು ಮಾನಸಿಕವಾಗಿ ಖಿನ್ನರಾಗಿದ್ದಾರೆ. ಪೊಲೀಸರು ಅವರನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. (ರಾಜ್ಯದ ಗೃಹ ಬಂಧನ ಪ್ರಕರಣಗಳು)
ಹುಟ್ಟು ಶ್ರೀಮಂತ : ಪ್ರಕಾಶ್ ಬೆಳವಡಿ ಅವರಿಗೆ ಸಾಕಷ್ಟು ಪಿರ್ತಾರ್ಜಿತವಾದ ಆಸ್ತಿ ಇದೆ. ಅವರು ಕುಡಿಯುವುದು, ಜೂಜಾಡುವುದು ಮುಂತಾದ ದುಶ್ಚಟಗಳನ್ನು ಬೆಳೆಸಿಕೊಂಡು, ಹಣವನ್ನು ಖರ್ಚು ಮಾಡುತ್ತಿದ್ದರು.
ಮಕ್ಕಳು ತಂದೆಗೆ ಹಲವಾರು ಬಾರಿ ಬುದ್ಧಿವಾದ ಹೇಳಿದ್ದರು. ಆದರೆ, ಅವರ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿರಲಿಲ್ಲ. ಇದರಿಂದ ಬೇಸರಗೊಂಡ ಮಕ್ಕಳು ಏಳು ವರ್ಷಗಳಿಂದ ಪಂಜರದಲ್ಲಿ ಕೂಡಿ ಹಾಕಿದ್ದರು.
ಪ್ರಾಣಿಗಳಂತೆ ಇದ್ದರು : ಮೃಗಾಲಯದಲ್ಲಿ ಪ್ರಾಣಿಗಳನ್ನು ಕೂಡಿಹಾಕುಂತಹ ದೊಡ್ಡ ಪಂಜರದೊಳಗೆ ಪ್ರಕಾಶ್ ಅವರನ್ನು ಕೂಡಿ ಹಾಕಲಾಗಿತ್ತು. ಅವರ ಕಾಲಿಗೆ ಸರಪಳಿ ಬಿಗಿಯಲಾಗಿತ್ತು. ಊಟವನ್ನು ಪಂಜರದೊಳಗೆ ನೀಡಲಾಗುತ್ತಿತ್ತು.
ಪೊಲೀಸರು ಪ್ರಕಾಶ್ ಅವರ ಮನೆಗೆ ತೆರಳಿದಾಗಲೂ ಅವರು ಪಂಜರದಲ್ಲೇ ಬಂಧಿಯಾಗಿದ್ದರು. ಅವರನ್ನು ಹೊರಗೆ ಕರೆತಂದ ಪೊಲೀಸರು, ಸರಪಳಿ ಬಿಚ್ಚಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಂಜರದಲ್ಲಿ ಬಂದಿಯಾಗಿದ್ದ ಕಾರಣ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.