ಸೂಚನೆ: ಸಿಇಟಿ ಕೌನ್ಸಲಿಂಗ್ ಇನ್ನೂ ಜಾರಿಯಲ್ಲಿದೆ
ಬೆಂಗಳೂರು, ಜು,30: ಇಂಜಿನಿಯರಿಂಗ್ ವಿಷಯದಲ್ಲಿ 8770 ಸೀಟುಗಳು ಖಾಲಿ ಉಳಿದಿರುವುದರಿಂದ ಸಿಇಟಿ ಕೌನ್ಸಿಲಿಂಗ್ ಅನ್ನು ಜುಲೈ 31ರವರಗೆ ವಿಸ್ತರಿಸಲಾಗಿದೆ. ವಿಷಯವನ್ನು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. ಇದಕ್ಕೂ ಮುನ್ನ 43 ಹೆಚ್ಚುವರಿ ಮೆಡಿಕಲ್ ಸೀಟು ಸೇರ್ಪಡೆಯಾಗಿರುವುದನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದರು.
ನಿಗದಿತ ವೇಳಾಪಟ್ಟಿ ಪ್ರಕಾರ ಸಿಇಟಿ ಕೌನ್ಸೆಲಿಂಗ್ ಈ ವೇಳೆಗೆ ಮುಗಿಯ ಬೇಕಾಗಿತ್ತು. ಆದರೆ, ಇನ್ನೂ ಇಂಜಿನಿಯರಿಂಗ್ ಸೀಟುಗಳು ಬಾಕಿ ಇರುವು ದಿರುವುದರಿಂದ ಮತ್ತು ವಿದ್ಯಾರ್ಥಿ ಗಳ ಒತ್ತಾಯದ ಮೇರೆಗೆ ಎರಡನೇ ಸುತ್ತಿನ ಕೌನ್ಸೆಲಿಂಗ್ ಅನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ.
ಸಿಇಟಿಗೆ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗುವುದು. ಸಿಇಟಿ ಕೌನ್ಸೆಲಿಂಗ್ ಸಮಯ ವಿಸ್ತರಣೆಗೆ ಸುಪ್ರೀಂಕೋರ್ಟ್ ಆದೇಶದಿಂದ ಅಡ್ಡಿಯಾಗಿದೆ ಎಂದು ಸಚಿವರು ಸಮರ್ಥನೆ ನೀಡಿದರು.
ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಕೌನ್ಸೆಲಿಂಗ್ ನಡೆಯಲಿದೆ ಎಂದು ದೇಶಪಾಂಡೆ ವಿವರಿಸಿದರು. ಕೌನ್ಸೆಲಿಂಗ್ ವಿಸ್ತರಣೆಯಿಂದ ಸೀಟುಗಳಿಗೆ ಕಾದಿರುವ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ.
ಮೆಡಿಕಲ್ ಸೀಟು ಸೇರ್ಪಡೆ: ಮೆಡಿಕಲ್ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ವಿಜಯನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸರ್ವೀಸಸ್(ವಿಮ್ಸ್) ಗೆ 43 ಸೀಟುಗಳು ಸೇರಿದಂತೆ ಆಲ್ ಇಂಡಿಯಾ ಕೋಟಾದಡಿಯಲ್ಲಿ 7 ಹೆಚ್ಚುವತಿ ಸೀಟು ಸೇರ್ಪಡೆಯಾಗಿದೆ ಎಂದರು.
ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥೆಗಳು ಸುಮಾರು 7415ಕ್ಕೂ ಅಧಿಕ ಬಿಇ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಸೇರಿಸಲು ಒಪ್ಪಿದೆ. ಹೀಗಾಗಿ ಸದ್ಯ ಇಂಜಿನಿಯರಿಂಗ್ ಸೀಟುಗಳ ಸಂಖ್ಯೆ 58,637ಕ್ಕೇರಿತ್ತು.
ಇದರ ಜೊತೆಗೆ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು 2094 ಎಂಬಿಬಿಎಸ್ ಸೀಟುಗಳು ಹೆಚ್ಚುವರಿಯಾಗಿ ಸೀಟು ಮ್ಯಾಟ್ರಿಕ್ಸ್ ಗೆ ಸೇರಿಸಲಾಗಿದೆ. ಜುಲೈ ಮೊದಲ ವಾರ ಸುಮಾರು 416 ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಗೌರ್ನಮೆಂಟ್ ಕೋಟಾಕ್ಕೆ ಸೇರಿಸಲಾಗಿತ್ತು ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಹೇಳಿದ್ದಾರೆ.
ಇ ಪೇಮೆಂಟ್: ಸಾಮಾನ್ಯ ಪ್ರವೇಶ ಪರೀಕ್ಷೆ ರಸೀದಿ ಪಾವತಿಗಾಗಿ ಇಂಡಿಯನ್ ಬ್ಯಾಂಕ್ ನಲ್ಲಿ ಪ್ರತ್ಯೇಕ ಖಾತೆ ಆರಂಭಿಸಲಾಗಿದೆ. ಸೀಟು ಆಯ್ಕೆಮಾಡಿಕೊಂಡ ವಿದ್ಯಾರ್ಥಿ ನೇರವಾಗಿ ತನ್ನ ಅಡ್ಮಿಷನ್ ಶುಲ್ಕವನ್ನು ಈ ಖಾತೆಗೆ ಜಮೆ ಮಾಡಬಹುದು. ಯಾವುದೇ ಡಿಮ್ಯಾಂಡ್ ಡ್ರಾಫ್ಟ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಚಕ್ರವರ್ತಿ ಮೋಹನ್ ಹೇಳಿದರು.
ಬ್ಯಾಂಕ್ ಖಾತೆಗೆ ನೇರವಾಗಿ ಆನ್ ಲೈನ್ ಮೂಲಕ ಪ್ರವೇಶಾತಿ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಯಾವುದೇ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸಬಹುದಾಗಿದೆ. ಇ ಪೇಮೆಂಟ್ ಬಗ್ಗೆ ಹೆಚ್ಚಿನ ವಿವರಗಳು ಹಾಗೂ ಶುಲ್ಕ ವಿವರಗಳ ಬಗ್ಗೆ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಕ್ರವರ್ತಿ ಮೋಹನ್ ತಿಳಿಸಿದರು.
ಮೇ1 ಬುಧವಾರ ಮತ್ತು ಮೇ 2ರ ಗುರುವಾರ 287 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 1.39 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಮೇ 3ರಂದು ಪರೀಕ್ಷೆ ನಡೆಸಲಾಗಿತ್ತು. ಸಾಮಾನ್ಯ ಪ್ರವೇಶ ಪರೀಕ್ಷೆ ಶ್ರೇಯಾಂಕ(Rank) ಆಧಾರದ ಮೇಲೆ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಜೂ.5 ರಿಂದ ಆರಂಭಗೊಂಡಿತ್ತು.