ಮೇಯಪ್ಪನ್ ಗೆ ಕ್ಲೀನ್ ಚೀಟ್ ಏಕೆ? : ಕೋರ್ಟ್
ಹಗರಣದ ತನಿಖೆ ನಡೆಸಲು ಬಿಸಿಸಿಐ ನಿಯೋಜಿಸಿದ್ದ ತನಿಖಾ ತಂಡವೇ ಅಸಾಂವಿಧಾನಿಕವಾಗಿದ್ದು ಪ್ರಕರಣದ ಸಂಪೂರ್ಣ ಮರುತನಿಖೆಯಾಗಬೇಕು ಎಂದು ಹೇಳಿದೆ.
ಅಳಿಯನಿಗೆ ತನಿಖಾ ತಂಡ ಕ್ಲೀನ್ಚಿಟ್ ನೀಡಿದ್ದ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಮರಳಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಬರುವುದು ನಿಶ್ಚಿತವಾಗಿತ್ತು. ಮೇಯಪ್ಪನ್, ರಾಜಕುಂದ್ರಾ ಎಲ್ಲರಿಗೂ ತನಿಖಾ ತಂಡ ಕ್ಲೀನ್ ಚಿಟ್ ನೀಡಿ, ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಇವರನ್ನು ಆರೋಪಿಗಳೆಂದು ಪರಿಗಣಿಸಲು ಯಾವುದೇ ಸಾಕ್ಷಿ ಪುರಾವೆಗಳಿಲ್ಲ ಎಂದು ಹೇಳಿತ್ತು.
ಆದರೆ ಇಂದು ದಿಲ್ಲಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಾರು ಪುಟಗಳ ವರದಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ಕುಂದ್ರಾ ಸಹ ಮಾಲೀಕ ಆಗಿದ್ದಾರೆ.
ರಾಜ್ ಕುಂದ್ರಾ ಜೊತೆಗೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ರ ಅಳಿಯ ಗುರುನಾಥ್ ಮೇಯಪ್ಪನ್ ಗೂ ಕ್ಲೀನ್ ಚಿಟ್ ಸಿಕ್ಕಿದೆ. ಮೇಯಪ್ಪನ್ ಮೇಲಿನ ಆರೋಪದ ಬಗ್ಗೆ ಎರಡು ಸದಸ್ಯರ ತಂಡ ತನಿಖೆ ನಡೆಸಿದ್ದು, ಅದರಲ್ಲಿ ಮೇಯಪ್ಪನ್ ಬೆಟ್ಟಿಂಗ್ ನಡೆಸಿರುವುದರ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ ಎನ್ನಲಾಗಿತ್ತು. ಆದರೆ, ಬಿಸಿಸಿಐ ಸ್ವತಂತ್ರ ವರದಿಯಲ್ಲಿ ಮೇಯಪ್ಪನ್ ಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ರಾಜ್ ಕುಂದ್ರಾ, ರಾಜಸ್ಥಾನ್ ರಾಯಲ್ಸ್ ಮತ್ತು ಇಂಡಿಯಾ ಸಿಮೆಂಟ್ಸ್ ಯಾವುದರ ವಿರುದ್ಧವೂ ಯಾವುದೇ ಸಾಕ್ಷ್ಯಾಧಾರಗಳು ಸಿಗದೇ ಇರುವ ಕಾರಣ ಕುಂದ್ರಾ ಸೇರಿ ಇತರರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ನಿರಂಜನ್ ಷಾ ಹೇಳಿದ್ದಾರೆ. ಬಿಸಿಸಿಐ ಕೈಗೊಂಡಿರುವ ಈ ಮಹತ್ವದ ನಿರ್ಧಾರವನ್ನು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಗೆ ಕಳುಹಿಸಿದ್ದು, ಈ ಬಗ್ಗೆ ಆಗಸ್ಟ್ 2ರಂದು ಅಂತಿಮ ನಿರ್ಧಾರ ಹೊರಬೀಳಲಿದೆ.
ಬಹುಶಃ ಎನ್ ಶ್ರೀನಿವಾಸನ್ ಮರು ನೇಮಕಾತಿ ಬಗ್ಗೆ ಕೂಡಾ ಅಂದೇ ತೀರ್ಮಾನ ಹೊರಬೀಳಲಿದೆ. ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧನವನ್ನು ದೆಹಲಿ ಪೊಲೀಸರು ತಳ್ಳಿ ಹಾಕಿದ್ದರು, ಬ್ರಿಟಿಷ್ ನಾಗರೀಕ ರಾಜ್ ಕುಂದ್ರಾ ಬಂಧನ ಕೂಡಾ ಅಷ್ಟು ಸುಲಭವಲ್ಲ ಎನ್ನಲಾಗಿತ್ತು. ಆದರೆ, ಪೊಲೀಸರಿಗೂ ಮುಂಚಿತವಾಗಿ ಜಗಮೋಹನ್ ದಾಲ್ಮಿಯಾ ನೇತೃತ್ವ ಬಿಸಿಸಿಐ ಅಧಿಕಾರಿಗಳು ರಾಜ್ ಕುಂದ್ರಾ ಅವರನ್ನು ಅಮಾನತುಗೊಳಿಸಿದ್ದರು.