ಆವೇಶದಲ್ಲಿ ಪತ್ನಿಯ ದಾರುಣ ಹತ್ಯೆ ಮಾಡಿ ಪತಿ ನೇಣಿಗೆ
ಪಶ್ಚಾತ್ತಾಪವೋ/ ಹೆದರಿಕೆಯೋ ತಾನೂ ನೇಣು ಹಾಕಿಕೊಂಡು ಇಹಲೋಕದ ವ್ಯಾಪಾರ ಮುಗಿಸಿ, ಕೊನೆಗೆ ಸಾವಿನಲ್ಲಾದರೂ ಪತ್ನಿಯನ್ನು ಅನುಸರಿಸಿ ಪತ್ನಿಯ ಹಿಂದೆ ಹೆಜ್ಜೆ ಹಾಕಿದ ಪತಿರಾಯ.
ಇದು ವಾಸ್ತವದಲ್ಲಿ ರಾಜಧಾನಿಯಲ್ಲಿ ಮಂಗಳವಾರ ನಡೆದಿರುವ ಘಟನೆ. ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯ ಶ್ರೀಕಂಠೇಶ್ವರ ನಗರದ ಶಂಕರನಗರ ನಿವಾಸಿ ನಂಜಪ್ಪ (65) ಪತ್ನಿ ಶಶಿಕಲಾರನ್ನು (50) ಕೊಲೆ ಮಾಡಿ, ತಾವೂ ನೇಣು ಬಿಗಿದುಕೊಂಡವರು.
ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಇದ್ದಾನೆ. ಮೂವರಿಗೂ ಮದುವೆಯಾಗಿದೆ. ಮಗ-ಸೊಸೆ ಇವರ ಜತೆಯಲ್ಲಿಯೇ ಇದ್ದಾರೆ.
ಇಂದು ಬೆಳಗ್ಗೆ ಮಗ-ಸೊಸೆ ಹೊರಗೆ ಹೋಗಿದ್ದಾಗ ದಂಪತಿ ನಡುವೆ ಸಣ್ಣ ವಿಷಯಕ್ಕೆ ಜಗಳ ಆರಂಭವಾಗಿದೆ. ಆದರೆ ಅದು ವಿಕೋಪಕ್ಕೆ ತಿರುಗಿದೆ. ಒಂದು ಹಂತದಲ್ಲಿ ನಂಜಪ್ಪ ದೊಣ್ಣೆಯಿಂದ ಪತ್ನಿ ತಲೆಗೆ ಹೊಡೆದಿದ್ದಾನೆ. ಪೆಟ್ಟಿನಿಂದಾಗಿ ಪತ್ನಿ ಶಶಿಕಲಾ @ ಪುಷ್ಪಲತಾ ಕುಸಿದುಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದರಿಂದ ಹೆದರಿದ ನಂಜಪ್ಪ ತಡಮಾಡದೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ಕುಟುಂಬದ ಸದಸ್ಯರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.