ಸ್ಪಾಟ್ ಫಿಕ್ಸಿಂಗ್ : ಕುಂದ್ರಾ, ಮೇಯಪ್ಪನ್ ಗೆ ಕ್ಲೀನ್ ಚಿಟ್
ರಾಜ್ ಕುಂದ್ರಾ ಜೊತೆಗೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ರ ಅಳಿಯ ಗುರುನಾಥ್ ಮೇಯಪ್ಪನ್ ಗೂ ಕ್ಲೀನ್ ಚಿಟ್ ಸಿಕ್ಕಿದೆ. ಮೇಯಪ್ಪನ್ ಮೇಲಿನ ಆರೋಪದ ಬಗ್ಗೆ ಎರಡು ಸದಸ್ಯರ ತಂಡ ತನಿಖೆ ನಡೆಸಿದ್ದು, ಅದರಲ್ಲಿ ಮೇಯಪ್ಪನ್ ಬೆಟ್ಟಿಂಗ್ ನಡೆಸಿರುವುದರ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ ಎನ್ನಲಾಗಿತ್ತು. ಆದರೆ, ಬಿಸಿಸಿಐ ಸ್ವತಂತ್ರ ವರದಿಯಲ್ಲಿ ಮೇಯಪ್ಪನ್ ಗೆ ಕ್ಲೀನ್ ಚಿಟ್ ಸಿಕ್ಕಿದೆ.
ಅಳಿಯ ಮೇಯಪ್ಪನ್ ಗೆ ಕ್ಲೀನ್ ಚಿಟ್ ಲಭಿಸಿರುವ ಕಾರಣ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತೊಮ್ಮೆ ಅಧಿಕಾರಕ್ಕೇರುವ ಎಲ್ಲ ಸಾಧ್ಯತೆಗಳು ಕಂಡು ಬಂದಿದೆ. ಆಗಸ್ಟ್ ಮೊದಲ ವಾರ ಈ ಬಗ್ಗೆ ಬಿಸಿಸಿಐ ತೀರ್ಮಾನ ಪ್ರಕಟಿಸಲಿದೆ ಎಂದು ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮ್ತಿಯಾ ಹೇಳಿದ್ದಾರೆ.
ರಾಜ್ ಕುಂದ್ರಾ, ರಾಜಸ್ತಾನ್ ರಾಯಲ್ಸ್ ಮತ್ತು ಇಂಡಿಯಾ ಸಿಮೆಂಟ್ಸ್ ಯಾವುದರ ವಿರುದ್ಧವೂ ಯಾವುದೇ ಸಾಕ್ಷ್ಯಾಧಾರಗಳು ಸಿಗದೇ ಇರುವ ಕಾರಣ ಕುಂದ್ರಾ ಸೇರಿ ಇತರರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ನಿರಂಜನ್ ಷಾ ಹೇಳಿದ್ದಾರೆ.
ಬಿಸಿಸಿಐ ಕೈಗೊಂಡಿರುವ ಈ ಮಹತ್ವದ ನಿರ್ಧಾರವನ್ನು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಗೆ ಕಳುಹಿಸಿದ್ದು, ಈ ಬಗ್ಗೆ ಆಗಸ್ಟ್ 2ರಂದು ಅಂತಿಮ ನಿರ್ಧಾರ ಹೊರಬೀಳಲಿದೆ. ಬಹುಶಃ ಎನ್ ಶ್ರೀನಿವಾಸನ್ ಮರು ನೇಮಕಾತಿ ಬಗ್ಗೆ ಕೂಡಾ ಅಂದೇ ತೀರ್ಮಾನ ಹೊರಬೀಳಲಿದೆ.
ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧನವನ್ನು ದೆಹಲಿ ಪೊಲೀಸರು ತಳ್ಳಿ ಹಾಕಿದ್ದರು, ಬ್ರಿಟಿಷ್ ನಾಗರೀಕ ರಾಜ್ ಕುಂದ್ರಾ ಬಂಧನ ಕೂಡಾ ಅಷ್ಟು ಸುಲಭವಲ್ಲ ಎನ್ನಲಾಗಿತ್ತು. ಆದರೆ, ಪೊಲೀಸರಿಗೂ ಮುಂಚಿತವಾಗಿ ಜಗಮೋಹನ್ ದಾಲ್ಮಿಯಾ ನೇತೃತ್ವ ಬಿಸಿಸಿಐ ಅಧಿಕಾರಿಗಳು ರಾಜ್ ಕುಂದ್ರಾ ಅವರನ್ನು ಅಮಾನತುಗೊಳಿಸಿದ್ದರು.