ಮುಜರಾಯಿ ವ್ಯಾಪ್ತಿಗೆ ಮತ್ತೊಂದು ಪುರಾತನ ದೇವಾಲಯ
ಬೆಂಗಳೂರು, ಜು 25: ರಾಜ್ಯದ ಮತ್ತೊಂದು ಪುರಾಣ ಪ್ರಸಿದ್ದ ದೇವಾಲಯ ಮುಜರಾಯಿ ವ್ಯಾಪ್ತಿಗೆ ಒಳಪಟ್ಟಿದೆ. ದೇವಾಲಯವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ ರಾಜ್ಯ ಸರಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ನಿಮಿಷಾಂಬ ದೇವಾಲಯ ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ಮತ್ತೊಂದು ದೇವಾಲಯವಾಗಿದೆ.
ಕಾವೇರಿ ನದಿ ತಟದಲ್ಲಿರುವ ಸುಮಾರು 400 ವರ್ಷಗಳ ಇತಿಹಾಸವಿರುವ ಈ ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟಿಗಳು ನಡೆಸಿದ ಹಣಕಾಸು ದುರುಪಯೋಗದಿಂದಾಗಿ ಸರಕಾರ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತಂದಿತ್ತು.
ದೇವಾಲಯದ ಟ್ರಸ್ಟಿಗಳು ಹಣ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದರಿಂದ ಕಂದಾಯ ಇಲಾಖೆ 30.04.2003ರಂದು ಧಾರ್ಮಿಕ ಮತ್ತು ದತ್ತಿ ಕಾಯಿದೆಯನ್ವಯ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತಂದಿತ್ತು.
ಇದನ್ನು ಪ್ರಶ್ನಿಸಿ ಟ್ರಸ್ಟ್ ಸದಸ್ಯರು ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು ಮತ್ತು ಏಕ ಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮತ್ತೆ ಟ್ರಸ್ಟ್ ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. ಈಗ ಮತ್ತೆ ಘನ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿದೆ.
ದೇವಾಲಯದ ನಿರ್ವಹಣೆಗೆ ಸರಕಾರ ಶೀಘ್ರದಲ್ಲೇ ಸಮಿತಿ ರಚಿಸಿ, ಆಡಳಿತ ಅಧಿಕಾರಿ ನೇಮಿಸಿ ದೇವಾಲಯದ ಅಭಿವೃದ್ದಿಗೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ನ್ಯಾಯಲಯ ಸರಕಾರಕ್ಕೆ ಆದೇಶ ನೀಡಿದೆ.