ಬಿಸಿಯೂಟದ ಹೊಣೆಯಿಂದ ಶಿಕ್ಷಕರು ನಿರಾಳ?
ಮಂಗಳವಾರ ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ರಾಜ್ಯದ ಅನೇಕ ಶಾಲೆಗಳಲ್ಲಿ ಕುಡಿಯುವ ಮತ್ತು ಬಿಸಿಯೂಟ ತಯಾರಿಸುವ ನೀರಿಗಾಗಿ ಹೊರಗಿನ ಸಂಪನ್ಮೂಲಗಳನ್ನು ಅವಲಂಭಿಸಲಾಗಿದೆ.
ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಎಲ್ಲಾ ಶಾಲೆಗಳಲ್ಲಿ ಸ್ವಂತ ಸಂಪನ್ಮೂಲಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ತರಿಸಿಕೊಂಡು, ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಮುಂದಿನ ಜೂನ್ ವೇಳೆಗೆ ರಾಜ್ಯದ ಎಲ್ಲ ಶಾಲೆಗಳು ಸ್ವಂತ ಸಂಪನ್ಮೂಲ ಆಧಾರಿತ ಕುಡಿಯುವ ನೀರಿನ ವ್ಯವಸ್ಥೆ ಹೊಂದುವಂತೆ ಮಾಡಲಾಗುವುದು. ಬಾವಿ ಅಥವ ಬೋರ್ ವೆಲ್ ಮೂಲಕ ಎಲ್ಲಾ ಶಾಲೆಗಳು, ಕುಡಿಯುವ ನೀರಿನ ಸಂಪರ್ಕ ಹೊಂದುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಶಿಕ್ಷಕರಿಗೆ ಮುಕ್ತಿ : ಬಿಸಿಯೂಟ ಪೂರೈಕೆಯ ಚಟುವಟಿಕೆಗಳಿಂದ ಶಿಕ್ಷಣ ಇಲಾಖೆಯನ್ನು ಬೇರ್ಪಡಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಬಿಸಿಯೂಟದ ದೈನಂದಿನ ಪ್ರಕ್ರಿಯೆಗಳಲ್ಲಿ ಶಿಕ್ಷಕರು ಪಾಲ್ಗೊಳ್ಳುತ್ತಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ.
ಆದ್ದರಿಂದ ಬಿಸಿಯೂಟ ಪೂರೈಕೆ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯಿಂದ ಬೇರ್ಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುವುದು ತಮಿಳುನಾಡು ರಾಜ್ಯದಲ್ಲಿ ಇಂತಹ ಯೋಜನೆ ಇದೆ. ರಾಜ್ಯದಲ್ಲೂ ಇಂತಹ ವ್ಯವಸ್ಥೆ ಮಾಡಲಾಗುವುದು ಎಂದರು.
ಅನುದಾನ ಹೆಚ್ಚಳ : ಕೇಂದ್ರ ಸರ್ಕಾರ ಬಿಸಿಯೂಟ ಅಡುಗೆ ಕೋಣೆ ನಿರ್ಮಿಸಲು ನೀಡುವ ಅನುದಾನವನ್ನು 60 ಸಾವಿರದಿಂದ 3 ಲಕ್ಷಕ್ಕೆ ಏರಿಸಿದೆ. ಕಳೆದ ವರ್ಷ 18 ಸಾವಿರ ಅಡುಗೆ ಕೋಣೆಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗಿದೆ.
ನೀರಿನ ಸೌಲಭ್ಯ ಇರುವ ಶಾಲಾ ಆವರಣದಲ್ಲಿ ತರಕಾರಿ ಬೆಳೆಯಲು 3 ರಿಂದ 7 ಸಾವಿರ ರೂ. ಅನುದಾನ ನೀಡಲಾಗುತ್ತದ. ವಾರದಲ್ಲಿ 3 ದಿನ ಮಕ್ಕಳಿಗೆ ತರಕಾರಿ ಕೊಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿಸಿಯೂಟ ಕಾರ್ಯಕ್ರಮವನ್ನು ಅನುದಾನ ರಹಿತ ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಹಣಕಾಸು ಇಲಾಖೆ ಜೊತೆ ಚರ್ಚಿಸಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಸದನಕ್ಕೆ ಉತ್ತರಿಸಿದರು. (ಬಿಹಾರ ಬಿಸಿಯೂಟ ದುರಂತ)