20 ಲಕ್ಷ ಬಿಪಿಎಲ್ ಕಾರ್ಡ್ ಜುಲೈ 31ರಿಂದ ರದ್ದು
ಮಂಗಳವಾರ ವಿಧಾನಸಭೆಗೆ ಮಾಹಿತಿ ನೀಡಿರುವ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಬಯೋಮೆಟ್ರಿಕ್ ದಾಖಲೆ ನೀಡದ ಹಾಗೂ 6 ತಿಂಗಳಿಂದ ರೇಷನ್ ಪಡೆಯದ 20 ಲಕ್ಷ ತಾತ್ಕಾಲಿಕ ಬಿಪಿಎಲ್ ಕಾರ್ಡ್ ಗಳನ್ನು ಜು.31ರಿಂದ ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಹಿಂದೆ ತಾತ್ಕಾಲಿಕ ಪರಿತರ ಚೀಟಿ ಪಡೆದ ಸಾರ್ವಜನಿಕರಿಗೆ ಬಯೋಮೆಟ್ರಿಕ್ ವಿವರ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಇದುವರೆಗೂ 20 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ವಿವರ ಸಲ್ಲಿಸಿಲ್ಲ. ಆ ಕಾರ್ಡ್ ಗಳನ್ನು ರದ್ದುಗೊಳಿಸಲಾಗುವುದು ಎಂದರು.
ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ಬಯೋಮೆಟ್ರಿಕ್ ವಿವರಗಳು ಅಗತ್ಯವಿದೆ. ಅದನ್ನು ನೀಡದೆ ಅಕ್ಕಿ ಪಡೆದರೆ, ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವ ಆತಂಕವಿದೆ. ಆದ್ದರಿಂದ ಬಯೋಮೆಟ್ರಿಕ್ ವಿವರಗಳು ಇಲ್ಲದ ಕಾರ್ಡ್ ಗಳನ್ನು ರದ್ದುಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಸದ್ಯಕ್ಕಿಲ್ಲ ಹೊಸ ಕಾರ್ಡ್ : ಹೊಸದಾಗಿ ರಾಜ್ಯದಲ್ಲೇ ಯಾವುದೇ ಬಿಪಿಎಲ್ ಕಾರ್ಡ್ ಗಳನ್ನು ನೀಡಲಾಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು 16 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿಯವರು ಅರ್ಜಿದಾರರ ಮನೆಗೆ ಭೇಟಿ ನೀಡಿ ವಿವರ ಸಂಗ್ರಹಿಸುತ್ತಾರೆ. ಗ್ರಾಪಂ ಕಾರ್ಯದರ್ಶಿಯಿಂದ ಅನುಮತಿ ದೊರೆತ ಬಳಿಕ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಸಚಿವರು ಹೇಳಿದರು.
ಎಪಿಎಲ್ ಕಾರ್ಡ್ ಪಡೆಯುವುದು ಸುಲಭ : ಎಪಿಎಲ್ ಕಾರ್ಡ್ ಪಡೆಯುವ ನಿಯಮವನ್ನು ಪರಿಷ್ಕರಿಸಲಾಗಿದ್ದು, ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದವರು ಪರಿಷಯಸ್ಥರನ್ನು ಕರೆತರಬೇಕಾಗಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ಪ್ರದೇಶದಲ್ಲಿ ಪರಿಚಯಸ್ಥರನ್ನು ಕರೆತಂದು ಕಾರ್ಡ್ ಮಾಡಿಸಿಕೊಳ್ಳಲು ತೊಂದರೆ ಆಗುತ್ತಿತ್ತು. ಇದನ್ನು ಗಮನಿಸಿದ ಸರ್ಕಾರ ನಿಯಮವನ್ನು ಪರಿಷ್ಕರಿಸಿದೆ ಎಂದು ಸಚಿವರು ಹೇಳಿದರು.