ಶಾಸಕ ಮಾನಪ್ಪ ವಜ್ಜಲ್ ಮನೆ ಮೇಲೆ ಐಟಿ ದಾಳಿ
ಬುಧವಾರ ಮಧ್ಯಾಹ್ನ ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಲಿಂಗಸಗೂರಿನಲ್ಲಿರುವ ಮಾನಪ್ಪ ವಜ್ಜಲ್ ಅವರ ಮನೆ ಮೇಲೆ ದಾಳಿ ನಡೆಸಿ, ದಾಖಲೆಗಳ ಪರಿಶೀಲಿಸುತ್ತಿದ್ದಾರೆ.
ಶಾಸಕ ಮಾನಪ್ಪ ವಜ್ಜಲ್ ಲಿಂಗಸಗೂರಿನಲ್ಲಿ ವೈಭವೋಪೇತ ಬಂಗಲೆ ನಿರ್ಮಿಸಿದ್ದಾರೆ ಎಂಬ ದೂರಿನ ಅನ್ವಯ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 20 ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಆದಿಚುಂಚನಗಿರಿ ಶಾಖಾ ಮಠದ ಮೇಲೆ ಕಳೆದವಾರ ದಾಳಿ ನಡೆಸಿ ಸುದ್ದಿಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಈ ವಾರ ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಾಸಕರ ಮನೆಯಲ್ಲಿನ ಪರಿಶೀಲನೆ ಮುಗಿದ ಬಳಿಕ ದಾಳಿಯ ವಿವರಗಳು ಲಭ್ಯವಾಗಲಿವೆ. (ಬಿಜಿಎಸ್ ಮೆಡಿಕಲ್ ಕಾಲೇಜಿನ ಮೇಲೆ ಐಟಿ ದಾಳಿ)
ಯಾರು ವಜ್ಜಲ್ : 2008ರ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ ಲಿಂಗಸಗೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆದರಿಕೆ ಹಾಕಿ ಸುದ್ದಿ ಮಾಡಿದ್ದರು.
ವಿಧಾನಸಭೆ ಚುನಾವಣೆ ಹತ್ತಿರವಾದಾಗ ಬಿಜೆಪಿಯಿಂದ ಹೊರಬಂದ ವಜ್ಜಲ್ ಜೆಡಿಎಸ್ ಸೇರಿದ್ದರು. ಲಿಂಗಸಗೂರು ಕ್ಷೇತ್ರದಿಂದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ.