ಮೋದಿ ಪ್ರಧಾನಿಯಾಗುವುದು ಸೇನ್ಗೆ ಬೇಕಾಗಿಲ್ವಂತೆ!
ಸೋಮವಾರ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, "ಒಬ್ಬ ಭಾರತೀಯನಾಗಿ ನನಗೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಬೇಕಾಗಿಲ್ಲ. ಅವರು ದೇಶದ ಅಲ್ಪಸಂಖ್ಯಾತರ ಸುಭದ್ರತೆಗಾಗಿ ಹೆಚ್ಚಿಗೆ ಏನನ್ನೂ ಮಾಡಿಲ್ಲ" ಎಂದು ಅಮಾರ್ತ್ಯ ಸೇನ್ ನುಡಿದಿದ್ದಾರೆ.
"ಅಲ್ಪಸಂಖ್ಯಾತರ ಭದ್ರತೆಗೆ ಸಂಬಂಧಿಸಿದಂತೆ ಮೋದಿ ಅವರ ರೆಕಾರ್ಡ್ ಅಷ್ಟು ಚೆನ್ನಾಗಿಲ್ಲ. ಅಲ್ಪಸಂಖ್ಯಾತರು ಮತ್ತೆ ದೇಶದಲ್ಲಿ ಅಭದ್ರತೆ ಅನುಭವಿಸುವುದು ಬೇಕಾಗಿಲ್ಲ. 2002ರಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಸಿದ ದಾಳಿ ರೂಪಿಸಿದ್ದಾಗಿತ್ತು. ಅಲ್ಪಸಂಖ್ಯಾತರಿಗಾಗಲಿ ಬಹುಸಂಖ್ಯಾತರ ಭದ್ರತೆಗಾಗಲಿ ಮೋದಿ ಏನನ್ನೂ ಮಾಡಿಲ್ಲ. ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೂಡ ಗುಜರಾತ್ ರಾಜ್ಯ ಅಂತಹ ಬೆಳವಣಿಗೆ ಕಂಡಿಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನರೇಂದ್ರ ಮೋದಿಯವರ ಆಡಳಿತ ಮಾದರಿಯನ್ನು ಕಟುವಾಗಿ ಟೀಕಿಸಿರುವ ಅವರು, ಆ ಮಾದರಿಯನ್ನು ಸರ್ವಥಾ ಅನುಮೋದಿಸುವುದಿಲ್ಲ ಎಂದಿದ್ದಾರೆ. ಅಚ್ಚರಿಯೆಂಬಂತೆ, ಗುಜರಾತ್ ಬದಲಾಗಿ ನರೇಂದ್ರ ಮೋದಿ ಅವರ ಕಟು ವಿರೋಧಿಯಾಗಿರುವ ನಿತಿಶ್ ಕುಮಾರ್ ಅವರು ಆಡಳಿತ ಚುಕ್ಕಾಣಿ ಹಿಡಿದಿರುವ ಬಿಹಾರದ ಆಡಳಿತ, ಬೆಳವಣಿಗೆ, ಸಾಮಾಜಿಕ ಬದಲಾವಣೆಯನ್ನು ಹಾಡಿ ಹೊಗಳಿದ್ದಾರೆ.
ದೇಶದ ನಾಯಕರುಗಳಲ್ಲಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಮತ್ತು ಉನ್ನತ ನಾಯಕರು. ಭಾರತವನ್ನು ನಡೆಸಲು ನರೇಂದ್ರ ಮೋದಿ ಅತ್ಯಂತ ಸಶಕ್ತರು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಹೇಳಿರುವ ಬೆನ್ನ ಹಿಂದೆಯೇ ಅಮಾರ್ತ್ಯ ಸೇನ್ ಅವರಿಂದ ಕಟುಟೀಕೆ ವ್ಯಕ್ತವಾಗಿದೆ. ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಕಾಂಗ್ರೆಸ್ ಬಿಂಬಿಸುತ್ತಿರುವ ಸಂದರ್ಭದಲ್ಲಿ ಸೇನ್ ಅವರ ಟೀಕೆ ಯುಪಿಎಗೆ ವರವಾಗಿ ಪರಿಣಮಿಸಿದೆ.