ಮಳೆ ನೀರು ಕೊಯ್ಲ ಅಳವಡಿಕೆಗೆ ಅಂತಿಮ ಗಡುವು
ಮಳೆ ನೀರು ಕೊಯ್ಲು ಪದ್ದತಿ ಬಗ್ಗೆ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಜಲಮಂಡಳಿ, ಆಗಸ್ಟ್ 3ರವೊಳಗೆ ಸಾರ್ವಜನಿಕರು ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಗಡುವು ನೀಡಿದೆ. ಗಡುವು ಮೀರಿದರೆ ನೀರಿನ ಸಂಪರ್ಕ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.
ಜಲಮಂಡಳಿಯ ಪ್ರಕಟಣೆಯ ಪ್ರಕಾರ 2,400 ಚದರ ಅಡಿಗೂ ಮೇಲ್ಪಟ್ಟ ವಿಸ್ತೀರ್ಣ ಹೊಂದಿರುವ ನಿವೇಶನಗಳಲ್ಲಿ ಕಡ್ಡಾಯವಾಗಿ ಆಗಸ್ಟ್ 3ರೊಳಗೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಬೇಕಾಗಿದೆ. ಇದನ್ನು ತಪ್ಪಿದರೆ, ನೀರಿನ ಸಂಪರ್ಕ ಸ್ಥಗಿತಗೊಳಿಸುವುದಾಗಿ ಹೇಳಿದೆ.
ಸರ್ಕಾರದ ನಿರ್ಲಕ್ಷ್ಯ : ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯ ಆದೇಶ ಹೊರಬಂದು 4 ವರ್ಷಗಳು ಕಳೆದರೂ ಬೆಂಗಳೂರಿನಲ್ಲಿ ಇದನ್ನು ಸಂಪೂರ್ಣವಾಗಿ ಜಾರಿಗೆ ತರಲು ಬೆಂಗಳೂರು ಜಲಮಂಡಳಿ ವಿಫಲವಾಗಿತ್ತು.ಸರ್ಕಾರದ ನಿರ್ಲಕ್ಷ್ಯವೂ ಇದಕ್ಕೆ ಪ್ರಮುಖ ಕಾರಣವಾಗಿತ್ತು.
ನಗರದ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲೇ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿರಲಿಲ್ಲ. ಹೊಸ ಸರ್ಕಾರ ಬಂದ ಮೇಲೆ ಜಲಮಂಡಳಿ ಈ ಪದ್ಧತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಮುಂದಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಆಗಸ್ಟ್ 3ರ ಅಂತಿಮ ಗಡುವು ನೀಡಿದೆ.
ಆದೇಶ ಬಂದಿದ್ದು ಯಾವಾಗ : 2009 ರ ಅ.15 ರಂದು ಸರ್ಕಾರ ಆದೇಶ ಹೊರಡಿಸಿ, ಎಲ್ಲಾ ಸರ್ಕಾರಿ ಕಟ್ಟಡಗಳು 2011ರ ಜೂನ್ ಒಳಗೆ ಹಾಗೂ 2400 ಚದರಡಿಗೂ ಹೆಚ್ಚಿನ ವಿಸ್ತೀರ್ಣವುಳ್ಳ ಖಾಸಗಿ ಕಟ್ಟಡಗಳು ಡಿ. 31, 2011ರೊಳಗೆ ಮಳೆ ನೀರಿನ ಕೊಯ್ಲು ಪದ್ಧತಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಈ ಗಡುವಿನಲ್ಲಿ ಪದ್ಧತಿ ಅಳವಡಿಕೆ ಕಾರ್ಯ ಪೂರ್ಣಗೊಂಡಿರಲಿಲ್ಲ. ಆದ್ದರಿಂದ 2012ರ ಮಾ.31ರವರೆಗೆ ಗಡುವು ವಿಸ್ತರಣೆ ಮಾಡಲಾಯಿತು. ಈ ಗಡುವು ಮೀರಿದ ಕಟ್ಟಡಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಕಡಿತಗೊಳಿಸುವ ಮೌಖಿಕ ಎಚ್ಚರಿಕೆ ನೀಡಿತ್ತು.