ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದ ನೀರು?
ಇದು ಬೇಸಿಗೆ ಕಾಲಕ್ಕೆ ಸಲ್ಲುವ ಯೋಜನೆ. ಮೊನ್ನೆ ಬೇಸಿಗೆಯಲ್ಲಿ ಬೆಂಗಳೂರು ಹನಿ ನೀರಿಗೂ ತತ್ತರಿಸಿ ಬಳಿಕ ತಜ್ಞರ ತಂಡವೊಂದು ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ರಾಜಧಾನಿ ಜನಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಪೂರೈಸಿ ಎಂದು ಸಲಹೆ ನೀಡಿದೆ.
BWSSB ಮಾಜಿ ಮುಖ್ಯಸ್ಥ ಬಿಎನ್ ತ್ಯಾಗರಾಜ ನೇತೃತ್ವದ ಸಮಿತಿ ಸಲ್ಲಿಸಿರುವ ಅಧ್ಯಯನ ವರದಿ ಇದಾಗಿದೆ. ಇನ್ನು ಮೂರು ದಶಕಗಳ ನಂತರ ಬೆಂಗಳೂರಿಗೆ ಕಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಿದೆ. ಆಗ ಕುಡಿಯುವ ನೀರಿನ ಅಗತ್ಯ ಹೆಚ್ಚಾಗಲಿದ್ದು, ಅದಕ್ಕೆ ಪರಿಹಾರಾರ್ಥವಾಗಿ 2051ರ ವೇಳೆಗೆ ಲಿಂಗನಮಕ್ಕಿ ಜಲಾಶಯದಿಂದ 30 ಟಿಎಂಸಿ ಅಡಿ ನೀರನ್ನು ತಿರುಗಿಸಿದರೆ ಸಮಸ್ಯೆ ನೀಗಬಹುದು ಎಂಬುದು ಸಮಿತಿ ಕಂಡುಕೊಂಡಿರುವ ಸತ್ಯ.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಸದನದಲ್ಲಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ ಜಲಮಂಡಳಿ ಎದ್ದುಕುಳಿತಿದ್ದು, ಪರಿಹಾರ ಮಾರ್ಗಗಗಳನ್ನು ಕಂಡುಕೊಳ್ಳಲು ಯತ್ನಿಸಿದೆ.
ನಗರಕ್ಕೆ ಕುಡಿಯುವ ನೀರಿನ ಪರ್ಯಾಯ ಮಾರ್ಗ ಕಂಡುಕೊಳ್ಳಲು ಅಂದಿನ ಸರಕಾರ 2010ರಲ್ಲಿ 9 ಸದಸ್ಯರ ಈ ಸಮಿತಿಯನ್ನು ರಚಿಸಿತ್ತು. ರಾಜದಾನಿಯಲ್ಲಿ ಇತ್ತೀಚೆಗೆ ವಸತಿ ನಿರ್ಮಾಣ ಕಾರ್ಯಗಳು ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದಕ್ಕಾಗಿ ನೀರಿನ ಬಳಕೆ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಾದ್ಯಂತ ಅಪಾರ್ಟ್ ಮೆಂಟುಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ಮಳೆ ಕೊಯ್ಲು ಕಡ್ಡಾಯಗೊಳಿಸಲಾಗಿದೆ.
ಲಿಂಗನಮಕ್ಕಿ ಜಲಾಶಯ: ಶರಾವತಿ ನದಿಗೆ ಅಡ್ಡಲಾಗಿ ವಿಶ್ವಪ್ರಸಿದ್ಧ ಜೋಗ ಜಲಪಾತದಿಂದ 6 ಕಿಮೀ ದೂರದಲ್ಲಿ ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯವನ್ನು 1964ರಲ್ಲಿ ನಿರ್ಮಿಸಲಾಗಿದೆ.