ದೇಶದ ಉದ್ಧಾರಕ್ಕೆ ಇಂಗ್ಲೀಷ್ ಅಲ್ಲ, ಹಿಂದುತ್ವ ಮುಖ್ಯ
ಪಾಟ್ನಾ, ಜು.21: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ ಎಸ್ ಎಸ್) ಕಾರ್ಯಕರ್ತರು ಒಗ್ಗಟ್ಟಾಗಿ ಹಿಂದುತ್ವದಿಂದ ದೇಶವನ್ನು ಗಟ್ಟಿಗೊಳಿಸಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಗವತ್ ಭಾನುವಾರ ಕರೆ ನೀಡಿದ್ದಾರೆ. ಇಂಗ್ಲೀಷ್ ಭಾಷೆಯಿಂದ ದೇಶ ಉದ್ಧಾರ ಆಗುತ್ತೆ ಎನ್ನುವುದು ಭ್ರಮೆ ಎಂದಿದ್ದಾರೆ.
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಇಂಗ್ಲೀಷ್ ಭಾಷೆ ಪ್ರಾಮುಖ್ಯತೆ ವಿರುದ್ಧ ನೀಡಿದ ಹೇಳಿಕೆ ವಿವಾದಕ್ಕೀಡಾಗಿರುವ ಬೆನ್ನಲ್ಲೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂಗ್ಲೀಷ್ ವ್ಯಾಮೋಹ ಬಿಡಿ ಎಂದು ಕರೆ ನೀಡಿದ್ದಾರೆ.
ದೇಶದ ಬಗ್ಗೆ ಹೆಮ್ಮೆ ಹಾಗೂ ಅರ್ಪಣಾ ಮನೋಭಾವ ಬೆಳೆಸುವುದೇ ನಿಜವಾದ ಶಿಕ್ಷಣ ವ್ಯವಸ್ಥೆಯ ಲಕ್ಷಣ. ಇದನ್ನು ಇಂಗ್ಲೀಷ್ ನಲ್ಲಿ ಹೇಳಿಕೊಡಲು ಸಾಧ್ಯವಿಲ್ಲ. ಮಾತೃಭಾಷೆಯಿಂದ ಮಾತ್ರ ದೇಶ, ತನ್ನವರ ಬಗ್ಗೆ ಚಿಂತಿಸಲು ಸಾಧ್ಯ. ಉತ್ತಮ ಸಂಸ್ಕಾರ ಹೊಂದಲು ಸಾಧ್ಯ ಎಂದು ಮೋಹನ್ ಹೇಳಿದ್ದಾರೆ.
ಶೈಕ್ಷಣಿಕ ಮುಂದುವರೆದ ವ್ಯಕ್ತಿಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ದುರಂತ. 90-100 ಅಂಕಗಳಿಸಿ ಏನು ಪ್ರಯೋಜನ, ಮಕ್ಕಳು ಸರ್ವಾಂಗೀಣವಾಗಿ ಬೆಳವಣಿಗೆ ಕಾಣಬೇಕು. ಪೋಷಕರು ಮಕ್ಕಳನ್ನು ದೇಶ ನಿರ್ಮಾಣಕ್ಕಾಗಿ ಬೆಳೆಸಬೇಕು, ಅಂಕ ಗಳಿಕೆಗಾಗಿ ಪ್ರೋತ್ಸಾಹಿಸಬಾರದು ಎಂದು ಮೋಹನ್ ಕರೆ ನೀಡಿದರು.
1940 ರಲ್ಲಿ ಸಂಘ ಪರಿವಾರವನ್ನು ಕೇಶವ್ ಬಲಿರಮ್ ಹೆಗ್ಡೇವಾರ್ ಅವರು ಸ್ಥಾಪಿಸಿದ್ದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲ ವ್ಯಕ್ತಿಪಡಿಸುವ ಉದ್ದೇಶಕ್ಕಾಗಿ ಮಾತ್ರವಲ್ಲದೆ, ಸ್ವಾಭಿಮಾನ, ಸ್ವಾಯುತ್ತತೆ ಬೆಳವಣಿಗೆಗೂ ಒತ್ತು ನೀಡಲಾಯಿತು. ಸಮಾಜದ ಉದ್ಧಾರ ಎಂದರೆ ಪ್ರತಿ ವ್ಯಕ್ತಿ ಆರ್ಥಿಕ, ಸಾಮಾಜಿಕವಾಗಿ ಏಳಿಗೆ ಕಾಣುವುದೇ ಆಗಿದೆ ಎಂದು ಮೋಹನ್ ಅಭಿಪ್ರಾಯಪಟ್ಟರು.
ಕಾರ್ಯಕರ್ತರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಹಿಂದುತ್ವ ರಾಷ್ಟ್ರೀಯತೆಯನ್ನು ಪ್ರತಿನಿಧಿಸಲಿದೆ. ದೇಶದಲ್ಲಿ ಬದಲಾವಣೆ ತರುವ ಏಕೈಕ ಮಾರ್ಗ ಹಿಂದುತ್ವವಾಗಿದೆ. ಆದ್ದರಿಂದ ಹಿಂದುತ್ವ ಗಟ್ಟಿಗೊಳಿಸಲು ಕಾರ್ಯಕರ್ತರು ದುಡಿಯಬೇಕು ಎಂದು ಅವರು ಹೇಳಿದ್ದಾರೆ.
ಸಂಘದ ಧ್ಯೇಯಗಳ ಬಗ್ಗೆ ತಿಳಿಯದೇ ಅನೇಕ ಜನರು ಮನ ಬಂದಂತೆ ಮಾತನಾಡುತ್ತಾರೆ. ಸಮಾಜಕ್ಕೆ ಹಿಂದುತ್ವ ಎಂದರೇನು? ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಇದನ್ನು ಧರ್ಮಕ್ಕೆ ಹೋಲಿಸಿ ತಪ್ಪು ಕಲ್ಪನೆ ಮಾಡಲಾಗುತ್ತಿದೆ. ಹಿಂದುತ್ವ ಎಂಬುದು ಹಿಂದುಸ್ಥಾನದ ತಿರುಳಾಗಿದೆ. ಆದ್ದರಿಂದ ಹಿಂದುತ್ವದಿಂದ ದೇಶವನ್ನು ಗಟ್ಟಿಗೊಳಿಸಬೇಕು ಎಂದು ಎಂದು ಭಾಗವತ್ ತಿಳಿಸಿದ್ದಾರೆ. (ಪಿಟಿಐ)