ದಾಖಲೆ ಕುಸಿತ ಕಂಡಿದ್ದ ಜಲಾಶಯಗಳು ಭರ್ತಿ
ಬೆಂಗಳೂರು, ಜು.20 : ಮುಂಗಾರು ಮಳೆ ಕರ್ನಾಟಕಕ್ಕೆ ಈ ಬಾರಿ ಅನ್ಯಾಯ ಮಾಡಿಲ್ಲ. ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಜಲಶಾಯಗಳು ಭರ್ತಿಯಾಗುತ್ತಿವೆ. ಕಳೆದ ವರ್ಷ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ರೈತರಲ್ಲಿ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿದೆ.
ಜೂನ್ ಮೊದಲ ವಾರದಿಂದ ಆರಂಭವಾದ ಮುಂಗಾರು ಮಳೆ ಮತ್ತು ಜುಲೈನಲ್ಲಿ ಎದುರಾದ ಎರಡು ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಉತ್ತಮವಾದ ಮಳೆ ಸುರಿಯುತ್ತಿದೆ. ಇದರಿಂದ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ.
ಇತಿಹಾಸದಲ್ಲೇ ದಾಖಲೆ ಕುಸಿತ ಕಂಡಿದ್ದ ಕಾವೇರಿ ಪಾತ್ರದ ಪ್ರಮುಖ ಜಲಾಶಯ ಕೆಆರ್ಎಸ್ ಭರ್ತಿಯಾಗಲು 9 ಅಡಿ ಬಾಕಿ ಉಳಿದಿದೆ. ಜಲಾಶಯಕ್ಕೆ 19,330 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 3,803 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.
ತಮಿಳುನಾಡಿಗೆ ನೀರು ಹರಿಸಿದ್ದರಿಂದ ಖಾಲಿಯಾಗಿದ್ದ ಹಾರಂಗಿ, ಕಬಿನಿ ಜಲಾಶಯಗಳು ಭರ್ತಿಯಾಗಿವೆ. ಕಬಿನಿ ಜಲಾಶಯಕ್ಕೆ 28,000 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 25,000 ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.
ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮಖ ಪಾತ್ರ ವಹಿಸುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು 25 ಅಡಿ ಬಾಕಿ ಇದೆ. ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿಯಾದ ಆಲಮಟ್ಟಿ ಜಲಾಶಯ ಭರ್ತಿಯಾಗಲು ಕೇವಲ 1 ಮೀಟರ್ ನೀರಿನ ಅಗತ್ಯವಿದೆ. (ಕರ್ನಾಟಕದಲ್ಲಿ ಮಳೆಯ ಅಬ್ಬರ)
ಜಲಾಶಯಗಳ ನೀರಿನ ಮಟ್ಟ
ಜಲಾಶಯ | ಇಂದಿನ ಮಟ್ಟ | ಗರಿಷ್ಟ ಮಟ್ಟ |
ಆಲಮಟ್ಟಿ | 518.050 ಮೀ | 519.60ಮೀ |
ಕೆಆರ್ಎಸ್ | 115 ಅಡಿ | 124.80 ಅಡಿ |
ಲಿಂಗನಮಕ್ಕಿ | 1793.90 ಅಡಿ | 1819 ಅಡಿ |
ಕಬಿನಿ | 80.50 ಅಡಿ | 84 ಅಡಿ |
ತುಂಗಭದ್ರಾ | 1627.57 ಅಡಿ | 1633 ಅಡಿ |
ಭದ್ರಾ | 165.10 ಅಡಿ | 186.00 ಅಡಿ |
ಹಾರಂಗಿ |
2857.86
ಅಡಿ |
2859.86
ಅಡಿ |