ಬಿಜಿಎಸ್ ಮೇಲೆ ದಾಳಿ : ಆದಾಯ ಇಲಾಖೆ ಸ್ಪಷ್ಟೀಕರಣ
ಆದಿಚುಂಚನಗಿರಿ ಮಠ, ಧಾರ್ಮಿಕ ಸಂಸ್ಥೆಗೆ ಸೇರಿದ ಕಚೇರಿ ಅಥವಾ ಯಾವುದೇ ಸಮುದಾಯದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿಲ್ಲ. ಆದರೆ, ಕರ್ನಾಟಕದಲ್ಲಿ ಕೆಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಹುಡುಕಾಟ ನಡೆಸಲಾಯಿತು ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ನಿರ್ದೇಶನಾಯಕದ ನಿರ್ದೇಶಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ದಶಕಗಳಿಂದ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ನಡೆಸಿ ಸಮಾಜಸೇವೆಯಲ್ಲಿ ತೊಡಗಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ವೈದ್ಯಕೀಯ ಕಾಲೇಜಿನ ಮೇಲೆ ಜು.18ರಂದು ನಡೆದ ಆದಾಯ ತೆರಿಗೆ ದಾಳಿ ನಡೆಸಿದ್ದರು. ಆದರೆ ಈ ದಾಳಿ ಕರ್ನಾಟಕದಲ್ಲಿ ಭಾರೀ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು.
ಈ ದಾಳಿ ರಾಜಕೀಯ ಪ್ರೇರಿತವಾದದ್ದು, ಇದು ಒಂದು ಸಮುದಾಯದ ಜನರ ಭಾವನೆಗಳಿಗೆ ನೀಡಿರುವ ಭಾರೀ ಹೊಡೆತ, ಈ ದಾಳಿ ಹಲವಾರು ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಜನರಿಗಾಗಿ ನಡೆಸುತ್ತಿರುವ ಸ್ವಾಮೀಜಿಗಳ ಮೇಲೆ ತೋರಿದ ಅಗೌರವ ಎಂದು ಹಲವಾರು ರಾಜಕೀಯ ನಾಯಕರು ಪಕ್ಷಭೇದ ತೊರೆದು ಖಂಡಿಸಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಡಿ.ವಿ. ಸದಾನಂದ ಗೌಡ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ಶೆಟ್ಟರ್ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಿಜೆಪಿ ನಾಯಕ ಸಿ.ಟಿ. ರವಿ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಆರ್ ಅಶೋಕ, ಜೆಡಿಎಸ್ ನಾಯಕ ಚೆಲುವರಾಯ ಸ್ವಾಮಿ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜೆ. ಬೋಪಯ್ಯ ಮುಂತಾದವರು ಆದಾಯ ತೆರಿಗೆ ದಾಳಿಯನ್ನು ತೀವ್ರವಾಗಿ ಆಕ್ಷೇಪಿಸಿದ್ದರು.
ರಾಜಕಾರಣಿಗಳಿಂದ ಇಷ್ಟೆಲ್ಲ ವಿರೋಧ ಕಂಡುಬಂದಿದ್ದರೂ, ನಮ್ಮ ಪ್ರಜ್ಞಾವಂತ ಓದುಗರು ಮಾತ್ರ, ಇದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನಿಸಿದ್ದರು. ಶಿಕ್ಷಣ ಸಂಸ್ಥೆ ಪ್ರಾಮಾಣಿಕವಾಗಿದ್ದರೆ, ಅದರ ವ್ಯವಹಾರಗಳ ಮೇಲೆ ಅದಕ್ಕೆ ನಂಬಿಕೆ ಇದ್ದರೆ ದಾಳಿ ಮಾಡಿದರೆ ಮಾಡಲಿ ಬಿಡಿ ಎಂದು ಕೇಳಿದ್ದರು.
ದಾಳಿಯಲ್ಲಿ ಏನೇನು ಸಿಕ್ಕಿತ್ತು : ಬಿಜಿಎಸ್ ಮೆಡಿಕಲ್ ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿಗೆ ಭಾರೀ ಪ್ರತಿರೋಧ ಕಂಡುಬಂದಿದ್ದರೂ, ಆದಾಯ ತೆರಿಗೆ ಮಾತ್ರ ಭಾರೀ ಮಾಲನ್ನು ವಶಪಡಿಸಿಕೊಂಡಿದೆ. ಪಿಟಿಐ ಸುದ್ದಿಸಂಸ್ಥೆಯ ವರದಿಯ ಪ್ರಕಾರ, 25 ಕೋಟಿ ರು. ಮೌಲ್ಯದ ಹಣ ಮತ್ತು ಚಿನ್ನಾಭರಣವನ್ನು ಇಲಾಖೆ ವಶಪಡಿಸಿಕೊಂಡಿದೆ. ಇದರಲ್ಲಿ 18 ಕೋಟಿ ರು. ನಗದಾಗಿದ್ದರೆ, 7 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.