ಹೊಟ್ಟೆತುಂಬ ಅನ್ನ ಕೊಡುವ ಅನ್ನಕೂಟ ಸುಖಿಭವ!
ಬೆಂಗಳೂರು, ಜು.20 : ಒಂದು ಹೊತ್ತಿನ ಊಟಕ್ಕಾಗಿ ಎಷ್ಟು ಕಷ್ಟಪಡಬೇಕು ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತು. ಅದರಲ್ಲೂ ಮಹಾನಗರ ಬೆಂಗಳೂರಿನಲ್ಲಿ ಒಂದು ಹೊತ್ತಿನ ಊಟಕ್ಕೆ ಎಷ್ಟು ಹಣ ನೀಡಬೇಕು ಎಂಬುದನ್ನು ಬಲ್ಲಿರಿ. ಇಂತಹ ಬೆಂಗಳೂರಿನಲ್ಲಿ ಒಂದು ಹೊತ್ತಿನ ಊಟ ಉಚಿತವಾಗಿ ಸಿಗುತ್ತದೆ ಎಂದರೆ, ನಂಬಲು ಸಾಧ್ಯವಿಲ್ಲ.
ಆದರೆ, ನಂಬಲೇ ಬೇಕಾದ ಉದಾಹರಣೆಯನ್ನು ನಾವು ನಿಮಗೆ ನೀಡುತ್ತೇವೆ. ಬೆಂಗಳೂರಿನ ಬಸವನಗುಡಿ ಬಳಿ, ಹಸಿದವರ ಹೊಟ್ಟೆಗೆ ಉಚಿತವಾಗಿ ಒಂದು ಹೊತ್ತಿನ ಊಟ ನೀಡುವ ಕಾಯಕವನ್ನು ಸಂಸ್ಥೆಯೊಂದು ಸದ್ದಿಲ್ಲದೇ ನಾಲ್ಕು ವರ್ಷಗಳಿಂದ ನಡೆಸುತ್ತಿದೆ.
ಧೀರೇಂದ್ರ ಕುಮಾರ್ ಎನ್ನುವವರು ಅನ್ನಕೂಟ ಎಂಬ ಹೆಸರಿನಲ್ಲಿ ಪ್ರಾರಂಭಿಸಿದ ಸಂಸ್ಥೆ ಇಂದು ನೂರಾರು ಜನರಿಗೆ ಉಚಿತವಾಗಿ ಮಧ್ಯಾಹ್ನದ ಊಟ ನೀಡುತ್ತಿದೆ. ಅದೂ ವರ್ಷದ 365 ದಿವಸ. ಅನ್ನಕೂಟ ಸತತವಾಗಿ ನಾಲ್ಕು ವರ್ಷಗಳಿಂದ ಈ ದಾಸೋಹವನ್ನು ನಡೆಸುತ್ತಿದೆ.
ಸಮಾಜ ಸೇವೆ ಮಾಡಬೇಕು ಎಂಬ ಮೂಲ ಉದ್ದೇಶದಿಂದ ಹುಟ್ಟಿಕೊಂಡ ಅನ್ನಕೂಟ, ಇಂದು ನೂರಾರು ಜನರ ಹಸಿದ ಹೊಟ್ಟೆಗೆ ಅನ್ನ ನೀಡುತ್ತಿದೆ. ಶುಚಿ, ರುಚಿ, ಪರಿಸರ ಪ್ರೇಮ ಅನ್ನ ಕೂಟದ ಮೂರು ಪ್ರಮುಖ ಧ್ಯೇಯಗಳು. ಅನ್ನಕೂಟದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಎಲ್ಲಿದೆ ಅನ್ನಕೂಟ?
ಅ.ನ.ಕೃಷ್ಣರಾವ್ ಪಾರ್ಕ್ ನಿಂದ ಬನಶಂಕರಿಗೆ ಹೋಗುವ ಮಾರ್ಗದಲ್ಲಿ ಕಾಲ್ನೆಡಿಗೆ ದೂರ ಸಾಗಿದರೆ, ಮಾಡ್ಯುಲ್ ರಸ್ತೆ ದೊರೆಯುತ್ತದೆ. ಮಾಡ್ಯಲ್ ರಸ್ತೆಯಲ್ಲಿ ಅನ್ನಕೂಟ ಎಲ್ಲಿ ಎಂದು ಕೇಳಿದರೆ, ಯಾರಾದರೂ ನಿಮಗೆ ದಾರಿ ತೋರಿಸುತ್ತಾರೆ.
ದೊಡ್ಡ ಹೋಟೆಲ್ ಅಲ್ಲ
ಅನ್ನಕೂಟ ದೊಡ್ಡ ಹೋಟೆಲ್ ಅಲ್ಲ. ಕುಳಿತು ಊಟ ಮಾಡುವಷ್ಟು ಜಾಗವೂ ನಿಮಗೆ ಇಲ್ಲ. ಇದೊಂದು ಪುಟ್ ಪಾತ್ ಮೇಲೆ ಸ್ಥಾಪಿತವಾಗಿರುವ ಹೋಟೆಲ್. ಆದರೆ, ಇಲ್ಲಿನ ಊಟದ ರುಚಿಯನ್ನು ನೀವು ಹಸಿವಾದಾಗ ಅನ್ನ ಕೂಟಕ್ಕೆ ಭೇಟಿ ನೀಡಿ ತಿಳಿಯಬೇಕು.
ಯಾವಾಗ ತೆರೆದಿರುತ್ತದೆ?
ಅನ್ನಕೂಟ ಪ್ರತಿದಿನ 12.15ರಿಂದ 1.30ವರೆಗೆ ಮಾತ್ರ ತೆರಿದಿರುತ್ತದೆ. ಉಳಿದ ಸಮಯದಲ್ಲಿ ನೀವು ಇಲ್ಲಿಗೆ ಆಗಮಿಸಿದರೆ, ಅನ್ನಕೂಟದ ನಾಮಫಲಕ ಮಾತ್ರ ನಿಮ್ಮನ್ನು ಸ್ವಾಗತಿಸುತ್ತದೆ. ವಾರದ ಏಳೂದಿನಗಳ ಕಾಲ ಮಧ್ಯಾಹ್ನ ಅನ್ನಕೂಟಕ್ಕೆ ಹೋದರೆ ನಿಮಗೆ ಹೊಟ್ಟೆ ತುಂಬುವುದು ಖಂಡಿತ.
ಕನಸು ಕಂಡವರು
ಅನ್ನಕೂಟದ ಕನಸು ಕಂಡವರು ಧೀರೇಂದ್ರ ಕುಮಾರ್. ಮೂಲತಃ ರಾಜಸ್ಥಾನದವರಾದರೂ ಬೆಂಗಳೂರಿಗೆ ಬಂದು 40 ವರ್ಷಗಳಿಗೂ ಅಧಿಕ ಸಮಯ ಕಳೆದಿದೆ. ಇವರೇ ಅನ್ನಕೂಟದ ರೂವಾರಿ. ಸದ್ಯ ಇವರ ಗೆಳೆಯರಾದ ಪ್ರಶಾಂತ್ ಸಿಂಘ್ವಿ ಮತ್ತು ಕಪಿಲ್ ಸಿಂಘ್ವಿ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
ಏನು ಸಿಗುತ್ತದೆ?
ಅನ್ನಕೂಟದಲ್ಲಿ ದಿನಕ್ಕೊಂದು ತಿಂಡಿ ದೊರೆಯುತ್ತದೆ. ಪಲಾವ್, ಜೀರಾರೈಸ್, ಟೋಮೆಟೋ ಬಾತ್, ಚಿತ್ರಾನ್ನ ಹೀಗೆ ದಿನಕ್ಕೆ ಒಂದು ತಿಂಡಿ ನಿಮಗೆ ಗ್ಯಾರಂಟಿ. ಅದು ಹೊಟ್ಟೆತುಂಬುವಷ್ಟು. ಜೊತೆಗೆ ಉಪ್ಪಿನಕಾಯಿ ಇದ್ದೇ ಇರುತ್ತದೆ. ಕೆಲವೊಮ್ಮೆ ಬಾಳೆಹಣ್ಣು, ಹಬ್ಬ ಹರಿದಿನದಂದು ಸಿಹಿ ತಿಂಡಿಯೂ ದೊರೆಯುತ್ತದೆ.
ಪರಿಸರ ಕಾಳಜಿ
ಅನ್ನಕೂಟದಲ್ಲಿ ಪಾರ್ಸೆಲ್ ದೊರೆಯುತ್ತದೆ. ಆದರೆ, ಪ್ಲಾಸ್ಟಿಕ್ ನಲ್ಲಿ ಕಟ್ಟಿಕೊಡುವುದಿಲ್ಲ. ನೀವು ಬಾಕ್ಸ್ ತಂದರೆ ಪಾರ್ಸೆಲ್ ದೊರೆಯುತ್ತದೆ. ಅನ್ನಕೂಟದ ಸುತ್ತಮುತ್ತಲಿನ ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು, ಕಚೇರಿಗಳು, ಆಟೋ ಚಾಲಕರು ಸೇರಿದಂತೆ 120 ರಿಂದ 130 ಮಂದಿಯ ಊಟಕ್ಕೆ ಇದೇ ಸ್ಥಳ. ಉಚಿತ ಊಟ, ಅದು ಹೊಟ್ಟೆತುಂಬಾ.