ಕುಡಿದು ವಾಹನ ಚಾಲನೆ ಮಾಡಿದ್ರೆ ಲೈಸನ್ ರದ್ದು
ಪ್ರಶ್ನೋತ್ತರ ಅವಧಿಯಲ್ಲಿ ಈ ಮಾಹಿತಿ ನೀಡಿದ ಅವರು, ಕುಡಿದು ವಾಹನ ಚಾಲನೆ ಮಾಡಿದಂತಹ ಮೂರು ಸಾವಿರ ಪ್ರಕರಣಗಳಲ್ಲಿ ಲೈಸೆನ್ಸ್ ರದ್ದು ಮಾಡಬೇಕೆಂದು ಈಗಾಗಲೇ ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಈ ಪೈಕಿ 250 ಲೈಸೆನ್ಸ್ ಗಳನ್ನು ಈಗಾಗಲೇ ರದ್ದು ಮಾಡಲಾಗಿದೆ. ಅದೇ ರೀತಿ ಬಾಕಿ ಉಳಿದಿರುವ ಲೈಸೆನ್ಸ್ ಗಳನ್ನು ಕೂಡಲೇ ರದ್ದುಮಾಡಬೇಕೆಂದು ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.
ಕುಡಿದು ವಾಹನ ಓಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ದಾಖಲಾಗುತ್ತಿವೆ. ಆದ್ದರಿಂದ ಪ್ರಕರಣ ದಾಖಲಾತಿ ಸಮಯ ರಾತ್ರಿ ಒಂದು ಗಂಟೆಗೆ ಸೀಮಿತವಾಗಿತ್ತು. ಈಗ ನಾಲ್ಕು ಗಂಟೆವರೆಗೂ ವಿಸ್ತರಣೆ ಮಾಡಲಾಗಿದೆ.
ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರು ಈಗಾಗಲೇ ಕ್ರಮ ಜರುಗಿಸಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಕುಡಿದು ವಾಹನ ಚಾಲನೆ ಮಾಡುವ ಪ್ರಕರಣದಲ್ಲಿ ವಾಹನ ಚಾಲನಾ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದರು.
ಕೇವಲ ಇದನ್ನು ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮಾತ್ರ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು. ಕುಡಿದವರ ವಿರುದ್ಧ ನೇರವಾಗಿ ಪೊಲೀಸರು ಕ್ರಮ ಕೈಗೊಳ್ಳಲಾಗುವುದಿಲ್ಲ. ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಆನಂತರ ಮೊಕದ್ದಮೆ ದಾಖಲು ಮಾಡಬೇಕಾಗುತ್ತದೆ ಎಂದರು.
ಈ ರೀತಿಯ ಪ್ರಕರಣಗಳನ್ನು ತಡೆಗಟ್ಟಲು 8 ಸಾವಿರ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಅಬಕಾರಿ ಇಲಾಖೆಯಲ್ಲಿರುವ 3 ಸಾವಿರ ಹೆಚ್ಚುವರಿ ಸಿಬ್ಬಂದಿಯ ಸೇವೆಯನ್ನು ಪೊಲೀಸ್ ಇಲಾಖೆ ಬಳಕೆ ಮಾಡಿಕೊಳ್ಳಲಿದೆ ಎಂದು ಅವರು ಹೇಳಿದರು.