ನಾಲ್ವರ ಬಲಿ ಪಡೆದ ಕೃಷ್ಣಪ್ಪ ಕೋರ್ಟ್ ಗೆ ಶರಣು
ಕಾರು ಡಿಕ್ಕಿ ಹೊಡೆಸಿ ನಾಲ್ವರ ಪ್ರಾಣ ತೆಗೆದ ನಂತರ ಪರಾರಿಯಾಗಿದ್ದ ಕೃಷ್ಣಪ್ಪ ಬುಧವಾರ ಸಂಜೆ ಬೆಂಗಳೂರು ಗ್ರಾಮಾಂತರ ಸಿಜೆಎಂ ನ್ಯಾಯಾಲಯದ ಮುಂದೆ ಶರಣಾದರು. ಕೂಡಲೇ ನ್ಯಾಯಾಲಯ ಪೊಲೀಸರನ್ನು ಕರೆಸಿ, ಕೃಷ್ಣಪ್ಪ ಅವರನ್ನು ಜು.27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಕೃಷ್ಣಪ್ಪ ಅವರನ್ನು ನಮ್ಮ ವಶಕ್ಕೆ ಒಪ್ಪಿಸಬೇಕೆಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಕೃಷ್ಣಪ್ಪ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
ಪೊಲೀಸರಿಗೆ ಚಳ್ಳೆಹಣ್ಣು : ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದ ಕೃಷ್ಣಪ್ಪ ಒಂದು ದಿನ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಬುಧವಾರ ಕೃಷ್ಣಪ್ಪ ಶರಣಾಗತಿ ಮುನ್ಸೂಚನೆ ಅರಿತ ಪೊಲೀಸರು ನ್ಯಾಯಾಲಯದ ಆವರಣದಲ್ಲಿದ್ದರು.
ಆದರೆ, ಅವರಿಗೆ ಚಳ್ಳೆಹಣ್ಣು ತಿನ್ನಿಸಿರುವ ಕೃಷ್ಣಪ್ಪ ನೇರವಾಗಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೃಷ್ಣಪ್ಪ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಿ, ಹುಟುಕಾಟ ನಡೆಸಿದ್ದರು. (ವ್ಯಾಪಾರಿಗಳಿಗೆ ಕಾರು ಡಿಕ್ಕಿ ನಾಲ್ವರ ಸಾವು)
ರೆಸಾರ್ಟ್ ನಲ್ಲಿ ವಿಶ್ರಾಂತಿ : ಕಾರು ಅಪಘಾತದ ನಂತರ ತಲೆಮರೆಸಿಕೊಂಡಿದ್ದ ಕೃಷ್ಣಪ್ಪ, ನಗರ ಹೊರವಲಯ ರೆಸಾರ್ಟ್ನಲ್ಲಿ ಆಶ್ರಯ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರೆಸಾರ್ಟ್ನಲ್ಲಿ ವಕೀಲರ ಜತೆ ಸಮಾಲೋಚನೆ ನಡೆಸಿದ ಬಳಿಕ ಬುಧವಾರ ಸ್ನೇಹಿತರ ಕಾರಿನಲ್ಲಿ ಬಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.