ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡುವ ಬಗ್ಗೆ ಬಿಜೆಪಿ ಸರ್ಕಾರ ಇದ್ದಾಗ ಸುವರ್ಣ ವಿಧಾನಸೌಧದಲ್ಲಿ ನಡೆದ ಕಲಾಪದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ನಂತರ ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಶಿಫಾರಸು ವರದಿಯನ್ನು ಸಚಿವ ಸಂಪುಟದ ಮುಂದಿಟ್ಟಿತ್ತು.
ಬುಧವಾರ (ಜು.17) ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಶಿಫಾರಸ್ಸಿಗೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ಈ ಸಭೆಯಲ್ಲಿ ಕರ್ನಾಟಕ ಮೂಲದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್ ಹಾಗೂ ವೀರಪ್ಪ ಮೊಯ್ಲಿ ಅವರು ಉಪಸ್ಥಿತರಿದ್ದರು.
ವಿಮಾನ ನಿಲ್ದಾಣ ಆರಂಭವಾದಾಗ ಅದಕ್ಕೆ ಯಾವ ಹೆಸರೇ ನೀಡಬೇಕು ಎಂಬ ಬಗ್ಗೆ ಭಾರೀ ಚರ್ಚೆಗಳಾಗಿದ್ದವು. ಅಣ್ಣ ಬಸವಣ್ಣ, ಸರ್ ಎಂ. ವಿಶ್ವೇಶ್ವರಯ್ಯ, ಕುವೆಂಪು, ಅಂಬೇಡ್ಕರ್, ಟಿಪ್ಪು ಸುಲ್ತಾನ್ ಮುಂತಾದ ಹೆಸರುಗಳು ಕೇಳಿಬಂದಿದ್ದವು.
ಡಾ ಹೇಮಚಂದ್ರ ಸಾಗರ್ ನೇತೃತ್ವದ 21 ಮಂದಿ ಸದಸ್ಯರ ಜಂಟಿ ಸದನ ಸಮಿತಿ BIALನ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಕೆಂಪೇಗೌಡರ ಹೆಸರಿಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನಿಲ್ದಾಣದಲ್ಲಿ ಕನ್ನಡ ಪತ್ರಿಕೆ ಒದಗಿಸುವುದು ಮತ್ತು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕುವುದು ಹಾಗೂ ಎಚ್ಎಎಲ್ ನಿಲ್ದಾಣಕ್ಕೆ ಮರುಚಾಲನೆ ನೀಡಬೇಕು ಎಂದು ಕೂಡಾ ಹೇಳಲಾಗಿತ್ತು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ 500 ಜನ್ಮ ವಾರ್ಷಿಕೋತ್ಸವ ಸಂದರ್ಭದಲ್ಲಿ ಬಿಐಎಎಲ್ ಮರುನಾಮಕರಣ ಮಾಡಲು ಯೋಜಿಸಲಾಗಿತ್ತು. ಆದರೆ, ಕೈಗೊಡಿರಲಿಲ್ಲ. 503ನೇ ಜನ್ಮ ದಿನೋತ್ಸವದ ಅಂಗವಾಗಿ ಈ ಕೊಡುಗೆ ಸಿಕ್ಕಿದೆ. ಈ ಹಿಂದೆ ವಿದೇಶಾಂಗ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಎಸ್ ಎಂ ಕೃಷ್ಣ ಅವರು ನಾಗರಿಕ ವಿಮಾನಯಾನ ಸಚಿವಾಲಯದೊಡನೆ ಚರ್ಚಿಸಿ ಶಿಫಾರಸಿಗೆ ಅಂಕಿತ ಬೀಳುವಂತೆ ಮಾಡಿದ್ದರು.
2012 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ದ ಸಂಪೂರ್ಣ ಕನ್ನಡಮಯವಾಗುವ ಕನ್ನಡಿಗರ ಕನಸಿಗೆ ಚಾಲನೆ ನೀಡಿದ್ದರು.
ವಿಮಾನಯಾನ ಸೂಚನೆಗಳು, ಆಗಮನ, ನಿರ್ಗಮನ ಸೂಚನೆಯನ್ನು ಕೂಡಾ ಕನ್ನಡದಲ್ಲಿ ನೀಡುವಂತೆ ವಿಮಾನಯಾನ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಪ್ರತಿ ವರ್ಷ ತಪ್ಪದೇ ಸಂಭ್ರಮದಿಂದ ನಾಡ ಹಬ್ಬ ಆಚರಿಸುವಂತೆ ಬಿಐಎಎಲ್ ಸಂಸ್ಥೆಗೆ ಸೂಚಿಸಲಾಗಿತ್ತು.
ವಿಮಾನ ನಿಲ್ದಾಣದ ಮಳಿಗೆಗಳಲ್ಲಿ ಕನ್ನಡ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳು ಸಿಗುವಂತೆ ಮಾಡುತ್ತೇವೆ ಎಂದು ಬಿಐಎಎಲ್ ನ ಅಧಿಕಾರಿಗಳು ಭರವಸೆ ಕೊಟ್ಟಿದ್ದರು.