ಜಯದೇವ ಆಸ್ಪತ್ರೆಗಿಲ್ಲ ನಮ್ಮ ಮೆಟ್ರೋ ಭೀತಿ
ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ, ಜಯದೇವ ಆಸ್ಪತ್ರೆಗೆ ನೂರಾರು ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು ಎಂದು ನಿಲ್ದಾಣ ನಿರ್ಮಾಣ ಯೋಜನೆ ಕೈ ಬಿಡಲಾಗಿದೆ ಎಂದರು.
ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವುದರಿಂದ ಆಗುವ ಅನಾನುಕೂಲಗಳ ಕುರಿತು ಆಸ್ಪತ್ರೆಯ ಮತ್ತು ಸ್ಥಳೀಯರೊಂದಿಗೆ ಚರ್ಚೆ ನಡೆಸಲಾಗಿದೆ. ನಿಲ್ದಾಣವಿಲ್ಲದಿದ್ದರೂ, ಆಸ್ಪತ್ರೆ ಮುಂಭಾಗದಲ್ಲಿ ರೈಲು ಮಾರ್ಗ ಹಾದು ಹೋಗಲಿದೆ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆ ಆವರಣದಿಂದ ಮೆಟ್ರೋ ನಿಲ್ದಾಣ ಸ್ಥಳಾಂತರ ಮಾಡುವ ಮಾರ್ಗ ಬದಲಾವಣೆಯಿಂದ ಮೆಟ್ರೋ ನಿಗಮಕ್ಕೆ145 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಆದರೆ, ರೋಗಿಗಳ ಹಿತದೃಷ್ಠಿಯಿಂದ ಮಾರ್ಗ ಬದಲಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಮೆಟ್ರೋ ಮಾರ್ಗ ಗುರುತಿಸುವಾಗ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಈಗ ಸರ್ಕಾರ ಮೆಟ್ರೋ ನಿಗಮಕ್ಕೆ ನಿರ್ದೇಶನ ನೀಡಿದ್ದು, ಮಾರ್ಗ ಬದಲಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಇದರಿಂದ ಹಲವುದಿನಗಳಿಂದ ಉಂಟಾಗಿದ್ದ ಮೆಟ್ರೋ ನಿಲ್ದಾಣ ವಿವಾದ ಬಗೆಹರಿದಿದೆ.
ಬದಲಾವಣೆ ಎಲ್ಲಿ : ಜಯದೇವ ಹೃದ್ರೋಗ ಆಸ್ಪತ್ರೆ ಆವರಣದಿಂದ ಮೆಟ್ರೋ ನಿಲ್ದಾಣ ಸ್ಥಳಾಂತರವಾಗುತ್ತದೆ. ಆದರೆ, ಅದನ್ನು ಎಲ್ಲಿ ಸ್ಥಾಪಿಸುತ್ತಾರೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಆಸ್ಪತ್ರೆಯ ಮುಂಭಾಗದಲ್ಲಿರುವ ವಸತಿ ಪ್ರದೇಶಕ್ಕೆ ಮಾರ್ಗ ಬದಲಾವಣೆ ಮಾಡಿದರೆ ಮತ್ತೊಂದು ವಿವಾದ ಉಂಟಾಗಲಿದೆ.
ವಸತಿ ಪ್ರದೇಶದಲ್ಲೇ ಮೆಟ್ರೋ ಕಾಮಗಾರಿಗೆ ಈಗಾಗಲೇ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು, ಸರ್ಕಾರದ ಮುಖ್ಯ ಕಾರ್ಯದರ್ಶಿವರೆಗೆ ವಸತಿ ಪ್ರದೇಶದಲ್ಲಿ ಮೆಟ್ರೋ ಮಾರ್ಗ ಬೇಡ ಎಂದು ಮನವಿ ಸಲ್ಲಿಸಿದ್ದಾರೆ. ಸರ್ಕಾರ ಈಗ ನೂತನ ಮಾರ್ಗ ಎಲ್ಲಿ ರಚಿಸುತ್ತದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.
2015ಕ್ಕೆ ಮೆಟ್ರೋ ಪೂರ್ಣ : ಮೊದಲನೇ ಹಂತದ ನಮ್ಮ ಮೆಟ್ರೋ ಯೋಜನೆಯ 42.3 ಕಿ.ಮೀ ಉದ್ದದ ಕಾಮಗಾರಿ 2015ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದ್ದು, ನಂತರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸ್ವಸ್ತಿಕ್ ನಿಂದ ಯಶವಂತಪುರದವರೆಗಿನ ಕಾಮಗಾರಿ ಶೇ 92ರಷ್ಟು ಪೂರ್ಣಗೊಂಡಿದೆ.
ಪೀಣ್ಯದಿಂದ ಹೆಸರಘಟ್ಟ ಕ್ರಾಸ್ ವರೆಗಿನ ಶೇ 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕೆಆರ್ ರಸ್ತೆಯಿಂದ ಆರ್ ವಿ ರಸ್ತೆ ವರೆಗಿನ ಕಾಮಗಾರಿ ಶೇ 94ರಷ್ಟು ಮುಗಿದಿದೆ.ಸ್ವಸ್ತಿಕ್ ನಿಂದ ಕೆ.ಆರ್.ಮಾರುಕಟ್ಟೆ ವರೆಗಿನ ಸುರಂಗ ಮಾರ್ಗ ಕಾಮಗಾರಿ ಶೇ 34ರಷ್ಟು ಪೂರ್ಣಗೊಂಡಿದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ ನಲ್ಲಿ ಪೀಣ್ಯ ಸ್ವಸ್ತಿಕ್ ರೈಲು : ಪೀಣ್ಯ ಮತ್ತು ಸ್ವಸ್ತಿಕ್ ನಿಲ್ದಾಣದ ನಡುವಿನ 10.30 ಕಿ.ಮೀ ಉದ್ದದ ರೈಲು ಮಾರ್ಗ ಸೆಪ್ಟೆಂಬರ್ ವೇಳಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಿಎಂ ಹೇಳಿದರು. ಜಾಲಹಳ್ಳಿ ಮತ್ತು ಹೆಸರಘಟ್ಟ ನಡುವಿನ ಮೆಟ್ರೋ ಓಡಾಟ 2015ರ ಮಾರ್ಚ್ ವೇಳೆಗೆ ಪ್ರಾರಂಭವಾಗಲಿದೆ ಎಂದರು.