ಕೇದಾರನಾಥ ಧಾಮಕ್ಕೆ ಬರಲಿದೆ ರೋಪ್ ವೇ!
ಡೆಹ್ರಾಡೂನ್, ಜುಲೈ 16: ಭೂತಗಳ ಧಾಮವಾಗಿ ಮಾರ್ಪಟ್ಟಿರುವ ಕೇದಾರನಾಥ ಧಾಮಕ್ಕೆ ಮತ್ತೆ ಅದರ ಗತವೈಭವವನ್ನು ಕಲ್ಪಿಸಿಕೊಡಲು ರಾಜ್ಯ ಸರಕಾರ ಸಂಕಲ್ಪ ತೊಟ್ಟಿದೆ. ಮಹಾಶಂಕರನ ಆವಾಸಸ್ಥಾನದ ಜೀರ್ಣೋದ್ಧಾರ ಸೇರಿದಂತೆ ತೀರ್ಥಯಾತ್ರಿಕರನ್ನು ಮತ್ತೆ ಕೇದಾರನಾಥ ಧಾಮಕ್ಕೆ ಆಕರ್ಷಿಸುವಂತಾಗಲು ಸಕಲ ರೀತಿಯಿಂದಲೂ ಸಜ್ಜಾಗುತ್ತಿದೆ.
ಈ ನಿಟ್ಟಿನಲ್ಲಿ, ಕಡಿದಾದ ಮಾರ್ಗವಾಗಿ ಕೇದಾರನಾಥ ಧಾಮಕ್ಕೆ ತೆರಳುವುದು ದುರ್ಗಮವಾಗಿರುವುದರಿಂದ ರೋಪ್ ವೇ ಮೂಲಕ ಸಂಪರ್ಕ ಕಲ್ಪಿಸಲು ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ ಎಂದು ರಾಜ್ಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇದರನಾಥದ ಬೇಸ್ ಕ್ಯಾಂಪ್ ಆದ ಗೌರಿಕುಂಡದಿಂದ ಬೆಟ್ಟ ಮಾರ್ಗವಾಗಿ 14 ಕಿಮೀ ಮೇಲೆ ಸ್ಥಾಪಿತವಾಗಿರುವ ತೀರ್ಥ ಕ್ಷೇತ್ರಕ್ಕೆ ಈ ropeway ಸೌಲಭ್ಯ ದಕ್ಕುವ ಸಾಧ್ಯತೆಯಿದೆ.
ಭಕ್ತರನ್ನು ಸಲೀಸಾಗಿ ಕೇದರನಾಥ ಕ್ಷೇತ್ರಕ್ಕೆ ಕೊಂಡೊಯ್ಯುವ ropeway ಸೌಲಭ್ಯಕ್ಕೆ ಕೇಂದ್ರ ಸಚಿವ ರಾಜೀವ್ ಶುಕ್ಲಾ ಅನುಮೋದನೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.
ಕಳೆದ ತಿಂಗಳು ಸಂಭವಿಸಿದ ಜಲಪ್ರಳಯ ಮತ್ತು ಭೂಸ್ಖಲನಗಳಿಂದ ಗೌರಿಕುಂಡ, ರಾಮಬಾಡ ಮತ್ತು ಕೇದರನಾಥ ಮಾರ್ಗವು ಅಳಿಸಿಹೋಗಿದೆ.
ಕೇದರನಾಥದ ಜೀರ್ಣೋದ್ಧಾರ ಕೈಗೆತ್ತಿಕೊಳ್ಳುವಾಗ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಕಾಲ್ನಡಿಗೆಯಲ್ಲಿ ತೆರಳುವುದಕ್ಕೆ ಪರ್ಯಾಯ ಮಾರ್ಗ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು. Archaeological Survey of India ನೆರವನ್ನೂ ಪಡೆಯಲಾಗುವುದು ಎಂದು ಉನ್ನತಾಧಿಕಾರಿ ಹೇಳಿದ್ದಾರೆ.
ಸದ್ಯಕ್ಕೆ ಕೇದರನಾಥದ ಪುನರುತ್ಥಾನಕ್ಕೆ ಕೈಹಾಕುವುದಿಲ್ಲ. ಒಂದು ತಿಂಗಳ ನಂತರ ಮಳೆ ಮೋಡಗಳು ಸಂಪೂರ್ಣವಾಗಿ ಕರಗಿ, ಆಕಾಶ ಸ್ವಚ್ಛವಾಗಲಿದೆ. ಆನಂತರ ಅಕ್ಟೋಬರಿನಿಂದ ಕೆಳಗೆ ಸ್ವಚ್ಛತಾ ಕಾರ್ಯ/ ನವೀಕರಣ ಕೈಗೆತ್ತುಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಉತ್ತರಕಾಂಡದಲ್ಲಿ ಈಗಾಗಲೇ 2 ಕಡೆ ರೋಪ್ ವೇ ವ್ಯವಸ್ಥೆಗಳಿದ್ದು, ಪೂರ್ಣಗಿರಿ ಮತ್ತು ಯಮುನೋತ್ರಿಯಲ್ಲಿಯೂ ಇಂತಹ ವ್ಯವಸ್ಥೆ ಜಾರಿಗೊಳಿಸುವ ಪ್ರಸ್ತಾವನೆಯಿದೆ.