ಮಂಡ್ಯ ಮುಡಾ: 5 ಕೋಟಿ ಗೋಲ್ ಮಾಲ್ 3 ಜನ ಬಲೆಗೆ
ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಿ ಗುತ್ತಿಗೆದಾರ ಚಂದ್ರಶೇಖರ್ ತಲೆಮರೆಸಿಕೊಂಡಿದ್ದು, ಆತನ ಬಂಧನ ನಂತರ ಅವ್ಯವಹಾರದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಎಸ್ಪಿ ಭೂಷಣ್ ಜಿ.ಬೋರಸ್ ವಿ ಹೇಳಿದ್ದಾರೆ.
ಡಿವೈಎಸ್ ಪಿ ಶೋಭಾರಾಣಿ, ಸಿಪಿಐಗಳಾದ ಹರೀಶ್ ಬಾಬು, ಶ್ರೀನಿವಾಸ್, ಇನ್ಸ್ ಪೆಕ್ಟರ್ ಗಳಾದ ಚಂದ್ರಶೇಖರ್, ಸೂರ್ಯನಾರಾಯಣರಾವ್, ನಾಗೇಗೌಡ ಮತ್ತು ತಂಡ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮುಡಾ ಆಯುಕ್ತ ಡಾ.ಶಿವರಾಮು, ಸ್ಥಳೀಯ ನಾಗಲಿಂಗಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಕಬ್ಬಳ್ಳಿ ಆನಂದ್ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಏನಿದು ಗೋಲ್ ಮಾಲ್: ವಿವೇಕಾನಂದ ನಗರದ ಒಳಚರಂಡಿ ಕಾಮಗಾರಿಗಾಗಿ ಮೂಡಾಗೆ ಬಂದಿದ್ದ 5 ಕೋಟಿ ರೂ. ಹಣವನ್ನು ಅಲಹಾಬಾದ್ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿತ್ತು. ಈ ಹಣವನ್ನು ತಮ್ಮ ಬ್ಯಾಂಕ್ನಲ್ಲಿ ಇಡುವಂತೆ ಇಂಡಿಯನ್ ಬ್ಯಾಂಕ್ನವರು ಮೂಡಾಗೆ ಮನವಿ ಮಾಡಿ ಪತ್ರ ಬರೆದಿದ್ದರು.
ಮನವಿ ಪುರಸ್ಕರಿಸಿದ ಮೂಡಾ ಅಲಹಾಬಾದ್ ಬ್ಯಾಂಕ್ನಲ್ಲಿದ್ದ ಹಣವನ್ನು ಫೆಬ್ರವರಿ ತಿಂಗಳಿನಲ್ಲಿ ಇಂಡಿಯನ್ ಬ್ಯಾಂಕ್ಗೆ ಐದು ಚೆಕ್ಗಳ ಮೂಲಕ ವರ್ಗಾಯಿಸಿತ್ತು. ಖಾತೆ ನಮೂದಿಸುವ ಸ್ಥಳವನ್ನು ಖಾಲಿ ಬಿಟ್ಟು ಆಯುಕ್ತ ಶಿವರಾಮು ಅವರು ಚೆಕ್ಗಳನ್ನು ನೀಡಿದ್ದು, ಅದಕ್ಕೆ ಕಾಂಗ್ರೆಸ್ ಮುಖಂಡ ಕಬ್ಬಳ್ಳಿ ಆನಂದ್, ಪ್ಯೂಚರ್ ವೆಲ್ ಫಾರ್ಮ್ ಆಂಡ್ ಎಸ್ಟೇಟ್ ಪ್ರೈ.ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಲಿಂಗಸ್ವಾಮಿ ಅವರುಗಳು ತಮ್ಮ ಖಾತೆಗಳ ಸಂಖ್ಯೆ ನಮೂದಿಸಿ ಜಮಾ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ಭೂಷಣ್ ಜಿ.ಬೋರಸ್ ವಿವರಿಸಿದ್ದಾರೆ.
ಈ ಹಣಕ್ಕೆ ಇಂಡಿಯನ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟಂತೆ ನಕಲಿ ಬಾಂಡ್ ಗಳನ್ನು ಸೃಷ್ಟಿಸಿದ್ದರು. ಕೆಲವು ತಿಂಗಳುಗಳ ನಂತರ ಕಾಮಗಾರಿಗಾಗಿ ಠೇವಣಿ ಹಣ ಪಡೆಯುವಂತೆ ಜಿಲ್ಲಾಧಿಕಾರಿಗಳು ಮೂಡಾ ಆಯುಕ್ತರಿಗೆ ಸೂಚಿಸಿದಾಗ ಹಣ ಗೋಲ್ಮಾಲ್ ಆಗಿರುವ ಬಗ್ಗೆ ಶಿವರಾಮು ಅವರು ಬ್ಯಾಂಕ್ನ ಹಿಂದಿನ ಮ್ಯಾನೆಜರ್ ರಾಮಸ್ವಾಮಿ ಹಾಗೂ ಹಾಲಿ ಮ್ಯಾನೇಜರ್ ಕುಮಾರ್ ನಾಯಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ಕೈಗೊಂಡ ನಂತರ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳಿಗಿಂತ ಆಯುಕ್ತ ಶಿವರಾಮು ಕೈವಾಡವಿರುವುದು ಸ್ಪಷ್ಟವಾಗತೊಡಗಿತು. ಆದರೆ, ಹಣ ಹಂಚಿಕೆಯಲ್ಲಿ ಕಾಂಗ್ರೆಸ್ ಮುಖಂಡನಿಗೆ ಸಿಂಹಪಾಲು ಸಿಕ್ಕಿದೆ.
ಅವ್ಯವಹಾರದ ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡ ಕಬ್ಬಳ್ಳಿ ಆನಂದ್ 2.3 ಕೋಟಿ ರೂ. ಹಣ ಡ್ರಾ ಮಾಡಿಕೊಂಡಿದ್ದರೆ, ನಾಗಲಿಂಗಸ್ವಾಮಿ 1.45 ಕೋಟಿ ರೂ., ಆಯುಕ್ತ ಶಿವರಾಮು 10 ಲಕ್ಷ ರೂ., ಗುತ್ತಿಗೆದಾರ ಚಂದ್ರಶೇಖರ್ 15 ರಿಂದ 25 ಲಕ್ಷ ರೂ. ಹಣ ಪಡೆದುಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.