ಕರಡಿ ಅರೆಸ್ಟ್: ನಿಟ್ಟುಸಿರು ಬಿಟ್ಟ ತುಮಕೂರಿನ ಜನ
ಹಿಂದಿನ ಸುದ್ದಿ: ಇತ್ತೀಚೆಗೆ ಬೆಂಗಳೂರು, ಮಾಲೂರು ಭಾಗಗಳಲ್ಲಿ ಆನೆಗಳ ಹಾವಳಿ ಕಂಡು ಭಯಭೀತಿಗೊಂಡಿದ್ದ ಜನಕ್ಕೆ ಸೋಮವಾರ ರಾತ್ರಿ ಮತ್ತೊಂದು ಶಾಕ್ ಆಗಿದೆ.
ಆದರೆ ಈ ಬಾರಿ ತುಮಕೂರಿನಲ್ಲಿ ಜಾಂಬುವಂತ ಅಂದರೆ ಕರಡಿಯ ಕಾಟ ಕಂಡುಬಂದಿದೆ. ಮಧ್ಯ ರಾತ್ರಿ ವೇಳೆಗೆ ದಿಕ್ಕುತಪ್ಪಿ ಬಂದ ಕರಡಿಯನ್ನು ಕಂಡು ನಗರದ ಹೃದಯ ಭಾಗವಾದ ಬಿ ಜಿ ಪಾಳ್ಯದ ಜನ ದಂಗಾಗಿದ್ದಾರೆ. ಮೊದಲು ಅದು ನಾಯಿಯಿರಬಹುದಾ? ಎಂದು ಜನ ಅನುಮಾನಗೊಂಡಿದ್ದಾರೆ. ಆದರೆ ಆ ವೇಳೆಗೆ ಕರಡಿ ತನ್ನ ನಿಜ ರೂಪ ತೋರಿಸಿ, ಹಾವಳಿ ಆರಂಭಿಸಿದೆ.
ಗಂಗಾವತಿಯ ಯುವಕ ಹನುಮೇಶ್ ಎಂಬ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಕರಡಿ ಆತನನ್ನು ತೀವ್ರವಾಗಿ ಗಾಯಗೊಳಿಸಿದೆ. ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಲ್ಪ ಸಮಯದ ನಂತರ ಸೀಬಯ್ಯ (65) ಎಂಬುವವರ ಮೇಲೂ ಕರಡಿ ದಾಳಿ ಮಾಡಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಸದರಿ ಕರಡಿ ರಾತ್ರಿಯಿಂದ ತುಮಕೂರಿನಲ್ಲಿ ಬಿಡುಬೀಸಾಗಿ ಓಡಾಡಿಕೊಂಡಿದೆ. ಮನೆಗಳನ್ನು ಹತ್ತಿ ಜನರಲ್ಲಿ ಆತಂಕ ಮೂಡಿಸಿದೆ. ಮನೆಗಳಿಂದ ಹೊರಬರದಂತೆ ಪೊಲೀಸರು ಕಟ್ಟೆಚ್ಚರ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಬನ್ನೇರುಘಟ್ಟ ಅರಣ್ಯಧಾಮದ ಪರಿಣತರಿಗೆ SOS ಸಂದೇಶ ಕಳುಹಿಸಲಾಗಿದ್ದು, ಹಿರಿಯ ಅಧಿಕಾರಿಗಳು ಇನ್ನೇನು ಸ್ಥಳಕ್ಕೆ ಧಾವಿಸಲಿದ್ದಾರೆ. ಮತ್ತುಬರಿಸುವ ಔಷಧ ನೀಡಿ ಕರಡಿಯನ್ನು ಹಿಡಿಯಲಾಗುವುದು. ಅಲ್ಲಿಯವರೆಗೂ ಜನರು ಮನೆಗಳಲ್ಲೇ ಸುರಕ್ಷಿತವಾಗಿ ಇರತಕ್ಕದ್ದು ಎಂದು ಪೊಲೀಸರು ಸೂಚಿಸಿದ್ದಾರೆ.