30 ಸಾವಿರ ಕೋಟಿ ಉಕ್ಕು ಉದ್ಯಮಕ್ಕೆ ತಿಲಾಂಜಲಿ
ಪೋಸ್ಕೋ ಕಂಪನಿ ಉಕ್ಕು ಸ್ಥಾವರ ಸ್ಥಾಪನೆಗೆ ಸ್ಥಳೀಯ ರೈತರ ಪ್ರತಿಭಟನೆ, ಜೆಡಿಎಸ್ ಸೇರಿದಂತೆ ವಿರೋಧ ಪಕ್ಷಗಳ ವಿರೋಧದಿಂದಾಗಿ ಕಂಪನಿಗೆ ಅಗತ್ಯವಾದ ಭೂಮಿ ಒದಗಿಸುವಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ವಿಫಲವಾಗಿತ್ತು. ಈ ಹಿಂದೆ ಒರಿಸ್ಸಾದಲ್ಲೂ ಇದೇ ರೀತಿ ಸಮಸ್ಯೆ ಎದುರಿಸಿದ್ದೆವು. ಆದರೆ, ಸಮಸ್ಯೆ ಬೇಗ ಪರಿಹಾರವಾಗಿತ್ತು. ಆದರೆ, ಇಲ್ಲಿ ಅಗತ್ಯ ಭೂಮಿ ಸಿಕ್ಕಿಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ(KIADB)ಗೆ ನೀಡಿರುವ 60 ಕೋಟಿ ರು.ಗಳ ಬ್ಯಾಂಕ್ ಗ್ಯಾರಂಟಿಯನ್ನು ಹಿಂಪಡೆದಿದ್ದೇವೆ ಎಂದು ಪೋಸ್ಕೋ ವಕ್ತಾರರು ಹೇಳಿದ್ದಾರೆ.
ಜನವರಿ 2010ರಲ್ಲಿ ಪೋಸ್ಕೋ ಸಂಸ್ಥೆ ಯೋಜನೆಗೆ ಸರ್ಕಾರದ ಅನುಮತಿ ಸಿಕ್ಕಿತ್ತು. ಜೂನ್ ತಿಂಗಳಿನಲ್ಲಿ ಪೋಸ್ಕೊ ಜೊತೆ ಸರ್ಕಾರ ಒಪ್ಪಂದ ಕೂಡಾ ಮಾಡಿಕೊಳ್ಳಲಾಗಿತ್ತು. SAIL ಸಹಯೋಗದೊಂದಿಗೆ ಗದಗ ಜಿಲ್ಲೆಯ ಮಂಡರಗಿ ತಾಲೂಕಿನ ಹಳ್ಳಿಗುಡಿಯಲ್ಲಿ ಉಕ್ಕು ಉದ್ಯಮ ಸ್ಥಾಪನೆಗೆ ಪೋಸ್ಕೋ ಮುಂದಾಗಿತ್ತು. ಆದರೆ, ಈಗ ಹಿಂದಕ್ಕೆ ಸರಿಯುತ್ತಿದ್ದಾರೆ. ಸೂಕ್ತ ಭೂಮಿಯನ್ನು ಒದಗಿಸಿದರೆ ಹಿಂದಕ್ಕೆ ಬರುವ ವಿಶ್ವಾಸವಿದೆ ಎಂದು ಕರ್ನಾಟಕ ಸರ್ಕಾರದ ವಾಣಿಜ್ಯಮತ್ತು ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಎಂ.ಎನ್ ವಿದ್ಯಾಶಂಕರ್ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ, ಮುರುಗೇಶ್ ನಿರಾಣಿ ಅವರು ಕೈಗಾರಿಕಾ ಸಚಿವರಾಗಿದ್ದ ಕಾಲದಲ್ಲಿ ಪೋಸ್ಕೊ ಕಂಪನಿ ಕಾರ್ಯ ಪ್ರಗತಿಯಲ್ಲಿತ್ತು. 2012ರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲೂ ಪೋಸ್ಕೊ ಕಂಪನಿ ಒಪ್ಪಂದ ಮುಂದುವರೆಸಲು ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಒಪ್ಪಿಗೆ ಸೂಚಿಸಿದ್ದರು.
ಜೆಡಿಎಸ್ ಅಡ್ಡಿ: ಆದರೆ, ಪೋಸ್ಕೊ ಕಂಪೆನಿಗೆ ಸುಮಾರು 5,700 ಎಕರೆ ಫಲವತ್ತಾದ ಭೂಮಿ ನೀಡಲು ಯಡಿಯೂರಪ್ಪ ಅವರು 600 ಕೋಟಿ ರು ಲಂಚ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.
ಕೊರಿಯಾ ಮೂಲದ ಪೋಸ್ಕೋ ಕಂಪನಿ ಸ್ಥಾಪನೆಗೊಂಡರೆ ಅದಕ್ಕೆ ಅಗತ್ಯವಾದ 44ಎಂಜಿಡಿ ನೀರನ್ನು ಸರ್ಕಾರ ಎಲ್ಲಿಂದ ಒದಗಿಸುತ್ತದೆ. ಹಿಮಾಲಯದಿಂದ ಮತ್ತೆ ಇಲ್ಲಿಗೆ ನೀರು ತಂದು ಬೊಮ್ಮಾಯಿ ಆಧುನಿಕ ಭಗೀರಥ ಆಗಬೇಕು ಅಷ್ಟೇ. ಶೇ.30ರಷ್ಟು ಅದಿರನ್ನು ಕೊರಿಯಾ ದೇಶಕ್ಕೆ ರಫ್ತು ಮಾಡಲು ಅವಕಾಶ ನೀಡಿರುವುದು ತಪ್ಪು. ನಮ್ಮ ಪಕ್ಷ ರೈತರ ಪರವಾಗಿದೆ, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದರು.
2005ರಲ್ಲಿ ಭಾರತಕ್ಕೆ ಕಾಲಿಟ್ಟಿರುವ ಫೋಸ್ಕೋ ಕಂಪನಿ ಈಗಾಗಲೇ ಒರಿಸ್ಸಾಗ ಜಗತ್ ಸಿಂಗ್ ಜಿಲ್ಲೆಯ ಪರಾದೀಪ್ ನಲ್ಲಿ 12 ದಶಲಕ್ಷ ಟನ್ ಸಾಮರ್ಥ್ಯದ ಘಟಕ ಸ್ಥಾಪಿಸಿದೆ. ಇದಕ್ಕಾಗಿ 55,500 ಕೋಟಿ ರುಪಾಯಿಗಳನ್ನು ವಿನಿಯೋಗಿಸಿದೆ, ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಅವರ ಅರ್ಸೆಲರ್ ಮಿತ್ತಲ್ ಕಂಪನಿ ರಾಜ್ಯದಲ್ಲಿ ಉಕ್ಕು ಕಂಪನಿ ಸ್ಥಾಪನೆಗೆ ಅರ್ಜಿ ಸಲ್ಲಿಸಿತ್ತು. ಮಿತ್ತಲ್ ಕಂಪನಿ 50,000 ಕೋಟಿ ರುಪಾಯಿಗಳ ಬಂಡವಾಳ ನಿರ್ಧರಿಸಿದ್ದು, ಆರಂಭದಲ್ಲಿ 30,000 ಕೋಟಿ ರುಪಾಯಿಗಳನ್ನು ವಿನಿಯೋಗಿಸಲು ನಿರ್ಧರಿಸಿತ್ತು. ಆದರೆ, ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನದಲ್ಲಿರುವ ಕಂಪನಿಗೆ ಕರ್ನಾಟಕದಲ್ಲಿ ನೆಲೆ ಸಿಕ್ಕಿಲ್ಲ.