ಧೋನಿ ಕ್ರೆಡಿಟ್ ಯಾರಿಗೆ ಸಲ್ಲುತ್ತದೆ ಗೊತ್ತಾ!?
ಮುಂಬೈ, ಜುಲೈ 15: ಕಳೆದ ವಾರ ಮಹೇಂದ್ರ ಸಿಂಗ್ ಧೋನಿ ಶ್ರೀಲಂಕಾ ವಿರುದ್ಧ ಲಾಸ್ಟ್ ಬಟ್ ಒನ್ ಬಾಲನ್ನು ಅಗಾಧ ಸಿಕ್ಸರಿಗೆ ಎತ್ತಿ, ಮೂಗು-ಮೂತಿ ತಿರುಗಿಸಿಕೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ಎಲಾ ಇವನ? ಇವನಪ್ಪಾ ನಮ್ಮ ಕ್ರಿಕೆಟ್ ದೇವರು ಅಂದರೆ, ಕ್ಯಾಪ್ಟನ್ ಕೂಲ್! ಎಂದು ಕೊಂಡಾಡತೊಡಗಿದರು.
ಇದೇ ವೇಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಕೆರಿಬಿಯನ್ ನೆಲದಲ್ಲಿ ತ್ರಿಕೋನ ಏಕದಿನ ಸರಣಿಯನ್ನು ಭಾರತಕ್ಕೆ ತಂದುಕೊಟ್ಟ ಕ್ಯಾಪ್ಟನ್ ಧೋನಿ ಬಗ್ಗೆ ಮಾಜಿ ಕ್ರಿಕೆಟಿಗರು ನಾಮುಂದು ತಾಮುಂದು ಎಂದು ಹೊಗಳುತ್ತಿದ್ದಾರೆ.
ಇಷ್ಟೆಲ್ಲ ಹೊಗಳಿಕೆಗೆ ಪಾತ್ರರಾದ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡಕ್ಕೆ ಪರಿಚಯಿದ್ದು, ಅವರಲ್ಲಿದ್ದ ನೈಜ ಪ್ರತಿಭೆಗೆ ನೀರೆರೆದವರು ಯಾರು ಎಂಬ ಪ್ರಶ್ನೆ ಎದುರಾದಾಗ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಧುತ್ತನೆ ಎದುರಾಗುತ್ತಾರೆ!
ಜಸ್ಟ್ ದಶಕದ ಹಿಂದೆ 2004ರಲ್ಲಿ ಏನಾಗಿತ್ತು ಅಂದರೆ ರಾಷ್ಟ್ರೀಯ ಆಯ್ಕೆ ತಂಡದ ಮುಖ್ಯಸ್ಥರಾಗಿ ಕಿರಣ್ ಮೋರೆ ಒಂದು ತಪ್ಪು (!?) ಮಾಡಿದ್ದರು. ಏನಪ್ಪಾ ಅಂದರೆ ಎಂಎಸ್ ಧೋನಿ ಎಂಬ ಅನಾಮಧೇಯ ಆಟಗಾರನನ್ನು ಕೀನ್ಯಾ ಪ್ರವಾಸಕ್ಕೆ ಭಾರತ 'ಎ' ತಂಡಕ್ಕೆ ಆಯ್ಕೆ ಮಾಡಿದ್ದರು. ಆದರೆ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಜಾರ್ಖಂಡದ ಧೋನಿಯನ್ನು ಆಯ್ಕೆ ಮಾಡುವುದಕ್ಕೆ ಆಗ ಒತ್ತಡವಿತ್ತು. ಪೂರ್ವ ವಲಯದ ಮತ್ತೊಬ್ಬ ಪ್ರತಿಭೆ ದೀಪ್ ದಾಸ್ ಗುಪ್ತಾ ಧೋನಿಗೆ ಎದುರು ಸ್ಪರ್ಧೆಗೆ ನಿಂತಿದ್ದರು. ಆದರೆ ಕೊನೆಗೆ ಮೋರೆ ಹಠ ಹಿಡಿದು ಧೋನಿಯನ್ನೇ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು.
ಒಂದು ವೇಳೆ ಅಂದು ವಿರೋಧಗಳಿಗೆ ಕಿವಿಗೊಟ್ಟು, ಕಿರಣ್ ಮೋರೆ ಅವರು MSD ಎಂಬ ಪ್ರತಿಭೆಗೆ ಮಣೆ ಹಾಕದೇ ಹೋಗಿದ್ದಿದ್ದರೆ... ಇಂದು ಕ್ಯಾಪ್ಟನ್ ಕೂಲ್ ಧೋನಿ ಏನಾಗಿರುತ್ತಿದ್ದರೋ? ಹಾಗಾಗಿ ಮೋರೆಗೆ ಈ ಸಂದರ್ಭದಲ್ಲಿ ಒಂದು ಥ್ಯಾಂಕ್ಸ್ ಹೇಳೋಣ.