ಚೆನ್ನೈನಲ್ಲಿ ಇಡ್ಲಿ ಕೊಟ್ರೆ, ಕೋಲ್ಕತ್ತಾದಲ್ಲಿ ಕೋಳಿ ಕೊಟ್ರು!
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಆರಂಭಿಸಿದ 1ರೂ.ಗೆ ಇಡ್ಲಿ-ಸಾಂಬಾರ್ ಯೋಜನೆ ಪ್ರಸಿದ್ಧಿ ಪಡೆದಿತ್ತು. ಪಶ್ವಿಮ ಬಂಗಾಳದಲ್ಲಿ ಇದನ್ನು ನಕಲು ಮಾಡಿ ಕೋಳಿ ಮಾಂಸ ಮಾರಾಟ ಮಾಡಲು 21 ಮಳಿಗೆಗಳನ್ನು ತೆರೆಯಲಾಗಿದೆ.
ಕೋಲ್ಕತಾದ ವಿವಿಧ ಭಾಗಗಳಲ್ಲಿ ಸಂಚಾರಿ ಕೋಳಿ ಮಾಂಸ ಮಾರಾಟ ಮಳಿಗೆಗಳನ್ನು ಸರ್ಕಾರ ಆರಂಭಿಸಿದೆ. ಈ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮೀನು, ಕೋಳಿ ಮಾಂಸ, ವಿವಿಧ ಬಗೆಯ ಹಣ್ಣುಗಳನ್ನು ಮಾರಲಾಗುತ್ತಿದೆ.
ಈ ಸಂಚಾರಿ ಸರ್ಕಾರಿ ಮಳಿಗೆಗಳಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ 150 ರೂ. ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮಾಂಸದ ಬೆಲೆ 200 ರೂ.ಗಳನ್ನು ದಾಟಿದೆ. ಆದ್ದರಿಂದ ಸರ್ಕಾರಿ ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ.
ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೆಲೆ ಹೆಚ್ಚಾಗಿರುವುದರಿಂದ ಜನರಿಗೆ ರಿಯಾಯಿತಿ ದರದಲ್ಲಿ ಅದನ್ನು ಪೂರೈಸಲು ಸರ್ಕಾರ ನಿರ್ಧರಿಸಿತು ಎಂದು ಮುಖ್ಯಮಂತ್ರಿ ಸಲಹೆಗಾರ ಪ್ರದೀಪ್ ಮಜುಂದಾರ್ ಹೇಳಿದ್ದಾರೆ.
ಈ ಮಳಿಗೆಗಳಲ್ಲಿ ಮುಕ್ತ ಮಾರುಕಟ್ಟೆಯ ದರಕ್ಕಿಂತ ಶೇ 20-25ರಷ್ಟು ಕಡಿಮೆ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ರಂಜಾನ್ ಸಂದರ್ಭದಲ್ಲಿ ಮಳಿಗೆಗಳನ್ನು ಪ್ರಾರಂಭಿಸಿರುವುದರಿಂದ ಜನರು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ ಎಂದು ಪ್ರದೀಪ್ ಹೇಳಿದ್ದಾರೆ.
ಕೋಲ್ಕತಾ ನಗರದಾದ್ಯಂತ ಈಗಾಗಲೇ 21 ವ್ಯಾನ್ ಗಳು ವಹಿವಾಟು ಆರಂಭಿಸಿವೆ. ರಂಜಾನ್ ಹಬ್ಬಕ್ಕೆ ಪೂರಕವಾಗಿ ರಿಯಾಯಿತಿ ದರದಲ್ಲಿ ಹಣ್ಣು ಮತ್ತು ಮಾಂಸ ಪೂರೈಕೆ ಮಾಡುವ ಎಂಟು ಮಳಿಗೆಗಳನ್ನೂ ನಗರದ ಪ್ರಮುಖ ಸ್ಥಳಗಳಲ್ಲಿ ಆರಂಭಿಸಲಾಗಿದೆ.
ತಮಿಳುನಾಡಿನಲ್ಲಿ ಅನ್ನ ಸಾಂಬರ್ ಕೊಟ್ರೆ, ಕೋಲ್ಕತ್ತಾದಲ್ಲಿ ಕೋಳಿ ಮಾಂಸ, ಹಣ್ಣು ಕೊಡ್ತಾರೆ. ಇನ್ನು ಉಳಿದ ರಾಜ್ಯಗಳು ಯಾವ ಯೋಜನೆ ಆರಂಭಿಸುತ್ತಾರೆ ಎಂದು ಕಾದು ನೋಡಬೇಕು!