ವರುಣನ ಅಬ್ಬರ ಜಲಾಶಯಗಳು ಬಹುತೇಕ ಭರ್ತಿ!
ಬೆಂಗಳೂರು, ಜು.15 : ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಂಡಿದ್ದರು. ಚಂಡ ಮಾರುತದಿಂದಾಗಿ ಉತ್ತಮವಾಗಿ ಮಳೆ ಸುರಿಯುತ್ತಿದೆ. ಉತ್ತರ ಕರ್ನಾಟಕದಲ್ಲಿಯೂ ಮಳೆಯ ಅಬ್ಬರ ಮುಂದುವರೆದಿದ್ದು, ಒಟ್ಟು ಏಳು ಸೇತುವೆಗಳು ಜಲಾವೃತವಾಗಿವೆ.
ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿದೆ. ಆದ್ದರಿಂದ, ಕೃಷ್ಣಾ ಹಾಗೂ ಅದರ ಉಪನದಿಗಳು ತುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಏಳು ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ 70,828 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆಮಮಟ್ಟಿ ಜಲಾಶಯದಲ್ಲಿ 516.30ಮೀ. ನೀರು ಸಂಗ್ರಹಣೆಯಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 3 ಮೀಟರ್ ನೀರಿನ ಅಗತ್ಯವಿದೆ.
ಕರಾವಳಿಯಯಲ್ಲಿ ಬಿಡುವು : ಕರಾವಳಿ ಭಾಗದಲ್ಲಿ ಸತತವಾಗಿ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದೆ. ಭಾನುವಾರ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಇದರಿಂದಾಗಿ ಕೃಷಿಕರು ಉತ್ಸಾಹದಿಂದ ಕೆಲಸಗೊಳಲ್ಲಿ ತೊಡಗಿದ್ದಾರೆ. ಮಂಗಳವಾರ ಮುಂಜಾನೆವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಲಾಶಯಗಳ ನೀರಿನ ಮಟ್ಟ : ಮುಂಗಾರು ದುರ್ಬಲವಾಗಿದ್ದರೂ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯ ಕೆಆರ್ಎಸ್ ನಲ್ಲಿ ನೀರಿನ ಮಟ್ಟ 113.15 ಅಡಿಗೆ ಏರಿಕೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜಲಾಶಯಗಳ ನೀರಿನ ಮಟ್ಟ
ಜಲಾಶಯ | ಇಂದಿನ ಮಟ್ಟ | ಗರಿಷ್ಟ ಮಟ್ಟ |
ಆಲಮಟ್ಟಿ | 516.30ಮೀ | 519.60ಮೀ |
ಕೆಆರ್ಎಸ್ | 113.15 ಅಡಿ | 124.80 ಅಡಿ |
ಲಿಂಗನಮಕ್ಕಿ | 1789.50 ಅಡಿ | 1819 ಅಡಿ |
ಕಬಿನಿ | 80.22 ಅಡಿ | 84 ಅಡಿ |
ತುಂಗಭದ್ರಾ | 1623.85 ಅಡಿ | 1633 ಅಡಿ |
ಭದ್ರಾ | 160.6 ಅಡಿ | 186.00 ಅಡಿ |