ಕೇದಾರನಾಥ ಆಗಿದೆ ಭೂತಗಳ ಪಟ್ಟಣ: ಸುಪ್ರೀಂಗೆ ವರದಿ
ನವದೆಹಲಿ, ಜುಲೈ13: ಅಭೂತಪೂರ್ವ ಮಳೆಗೆ ಸಿಕ್ಕಿ ನಲುಗಿದ ಮಹಾಶಿವನ ಪುಣ್ಯಕ್ಷೇತ್ರ ಕೇದಾರನಾಥ ಈಗ ಭೂತಗಳ ಪಟ್ಟಣವಾಗಿ ಮಾರ್ಪಟ್ಟಿದೆ ಎಂದು ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ವರದಿ ತಿಳಿಸಿದೆ.
ಜಲಪ್ರಳಯ, ಪ್ರವಾಹಕ್ಕೆ ತುತ್ತಾದ ಕೇದಾರನಾಥದ ಸ್ಥಿತಿಗತಿ, ಪರಿಹಾರ ಕಾರ್ಯಾಚರಣೆ ಬಗ್ಗೆ ವರದಿ ಸಲ್ಲಿಸುವಂತೆ National Disaster Management Authority (NDMA)ಗೆ ಜುಲೈ 3ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು.
ಪ್ರವಾಹದ ಸೆಳೆತಕ್ಕೆ ಸಿಕ್ಕಿ ಹರಿದುಬಂದ ಹೆಣಗಳು ಎಲ್ಲೆಂದರಲ್ಲಿ ಭೂಮಿಯಲ್ಲಿ ಹುದುಗಿವೆ. ಇದರಿಂದ ಕೇದಾರನಾಥ ಈಗ ghost town ಆಗಿ ಭಾಸವಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉತ್ತರಕಾಂಡದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಚಾರ್ ಧಾಮ್ ಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಕೇದಾರನಾಥದ ದುಃಸ್ಥಿತಿಯನ್ನು ನ್ಯಾಯಮೂರ್ತಿ ಎಕೆ ಪಟ್ನಾಯಕ್ ಮತ್ತು ಎಂವೈ ಇಕ್ಬಾಲ್ ಅವರ ನ್ಯಾಯಪೀಠದ ಗಮನಕ್ಕೆ ತಂದರು. ರಾಜ್ಯ ಸರಕಾರ ಸಕಲ ನೆರವಿನೊಂದಿಗೆ ಸಮಗ್ರ ಪರಿಹಾರ ಮತ್ತು ಸುರಕ್ಷಾ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಮಾಹಿತಿ ನೀಡಿದರು.
ಜಲಪ್ರಳಯದ ಸಮಯದಲ್ಲಿ ಕಾಣೆಯಾದವರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಮತ್ತು ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು ಜಲಪ್ರಳಯದ ಸಮಯದಲ್ಲಿ ಕೇದಾರನಾಥದಲ್ಲಿದ್ದ ತಮ್ಮ ತಮ್ಮ ರಾಜ್ಯದವರ ಪಟ್ಟಿಯನ್ನು ಸಲ್ಲಿಸುವಂತೆಯೂ ಸೂಚಿಸಿರುವುದಾಗಿ ಉತ್ತರಾಖಂಡ ಸರಕಾರ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿದೆ.
ಕೇದಾರನಾಥ ಧಾಮವೊಂದನ್ನು ಬಿಟ್ಟು ಉಳಿದೆಲ್ಲ ಪ್ರವಾಹಪೀಡಿತ ಭಾಗಗಳಲ್ಲಿ ದೂರಸಂಪರ್ಕ ಮಾರ್ಗಗಳನ್ನು ದುರಸ್ಥಿಗೊಳಿಸಲಾಗಿದೆ. ಕೇದಾರನಾಥದಲ್ಲಿ ಸಿಲುಕಿರುವ ಸ್ಥಳೀಯರಿಗೆ ಇನ್ನೂ ಮೂರು ತಿಂಗಳಿಗೂ ಹೆಚ್ಚು ಕಾಲ ಉಚಿತ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ.