ಲೋಕಸಭೆ ಚುನಾವಣಾ ಕಣಕ್ಕೆ ಅನಿಲ್ ಕುಂಬ್ಳೆ?
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡತೊಡಗಿದೆ.ಆದರೆ, 2009ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಈ ಬಾರಿ ಗಾಳಿಸುದ್ದಿ ನಂಬುವುದು ಸ್ವತಃ ಕುಂಬ್ಳೆಗೆ ಕಷ್ಟವಾಗಬಹುದು. ಕಾರಣ, ಕುಂಬ್ಳೆ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿರುವುದು ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್!
ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು, ಜನಪ್ರಿಯ ತಾರೆಗಳನ್ನು ಕಣಕ್ಕಿಳಿಸುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಈ ಯೋಜನೆಯಂತೆ ಅನಿಲ್ ಕುಂಬ್ಳೆ ಅವರಿಗೆ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲು ಬಿಜೆಪಿ ಮುಂದಾಗಿದೆಯಂತೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಾಪಸ್ಸಾತಿ ಬಗ್ಗೆ ತಲೆ ಕೆಡಿಸಿಕೊಂಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ತಮ್ಮ ಕ್ಷೇತ್ರವನ್ನು ಅನಿಲ್ ಕುಂಬ್ಳೆಗೆ ಬಿಟ್ಟುಕೊಡುತ್ತಾರೆಯೇ? ಮುಂಬರುವ ಮುಂಬರುವ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದೇ ಉಳಿಯುತ್ತಾರೆಯೇ? ಅನಂತ್ ಕುಮಾರ್ ಅವರಿಗೆ ಉನ್ನತ ಹುದ್ದೆಯ ಆಫರ್ ನೀಡಲಾಗಿದೆಯೇ? ಯಡಿಯೂರಪ್ಪ ಬಿಜೆಪಿಗೆ ವಾಪಸ್ ಬಂದರೆ ಮುಜುಗರ ತಪ್ಪಿಸಲು ದೆಹಲಿಯಲ್ಲೇ ಉಳಿಯಲು ಅನಂತ್ ನಿರ್ಧರಿಸಿದ್ದಾರೆಯೇ? ಎಂಬ ಎಲ್ಲಾ ಪ್ರಶ್ನೆಗಳು ಧುತ್ತನೆ ಮೇಲೇಳುತ್ತದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್ ಅವರ ಜನಪ್ರಿಯತೆ ಕುಗ್ಗುತ್ತಿದೆ ಎಂಬ ವರದಿ ಇದೆಯಂತೆ ಹೀಗಾಗಿ ಪ್ರಭಾವಿ ಸ್ಪರ್ಧಿಗಳನ್ನು ಕಣಕ್ಕಿಳಿಸಿ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಯೋಜಿಸಿದ್ದು ಅನಿಲ್ ಕುಂಬ್ಳೆ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಅನಂತ್ ಅವರು ಬಯಸಿದರೆ ರಾಜ್ಯ ಸಭೆಯ ಮೂಲಕ ಸಂಸತ್ ಪ್ರವೇಶಿಸುವ ಅವಕಾಶ ಒದಗಿಸಲು ಬಿಜೆಪಿ ಹಿರಿಯ ಮುಖಂಡರು ಯೋಜಿಸಿದ್ದಾರೆ.
ಒಟ್ಟಾರೆ, ಈ ಬಗ್ಗೆ ಅನಂತ್ ಆಗಲಿ, ಅನಿಲ್ ಕುಂಬ್ಳೆಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ರಾಜ್ಯ ಬಿಜೆಪಿ ಘಟಕ ಅನಿಲ್ ಕುಂಬ್ಳೆ ಹೆಸರನ್ನು ಪ್ರಸ್ತಾಪಿಸಿ ಕೇಂದ್ರ ಸಮಿತಿಗೆ ಕಳಿಸಿತ್ತು. ಈ ವಿಷಯವನ್ನು ಹಿರಿಯ ವಕ್ತಾರ ಪ್ರಕಾಶ್ ಜಾವೇದ್ಕರ್ ಅವರೇ ಬಹಿರಂಗಪಡಿಸಿದ್ದರು.
ಒಟ್ಟಾರೆ, ಲೋಕಸಭೆ ಚುನಾವಣೆ ಹಿತದೃಷ್ಟಿಯಿಂದ ಮೋದಿ ಟೀಮ್ ಹಲವು ಅಚ್ಚರಿಯ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.