ಚಿತ್ರಗಳಲ್ಲಿ : ಪ್ರಕೃತಿ ವಿಕೋಪಕ್ಕೆ ನಲುಗಿದ ಅಸ್ಸಾಂ
ಗುವಾಹಟಿ, ಜು10: ಪ್ರಕೃತಿಯ ವಿಕೋಪಕ್ಕೆ ನಲುಗಿದ ಉತ್ತರಾಖಂಡ ರಾಜ್ಯ ಪರಿಹಾರ ಕಾರ್ಯ ಮುಗಿಸಿ ಕಾಣೆಯಾದವರ ಪತ್ತೆಗಾಗಿ ತಂತ್ರಜ್ಞಾನಕ್ಕೆ ಮೊರೆ ಹೊಕ್ಕಿದೆ. ಈ ನಡುವೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭೀಕರ ವರ್ಷ ಧಾರೆಗೆ ಅಸ್ಸಾಂ ತತ್ತರಿಸಿ ಹೋಗಿದೆ. ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿವೆ.
ಬ್ರಹ್ಮಪುತ್ರ ನದಿ ಎಂದಿನಂತೆ ತನ್ನ ಆರ್ಭಟ ಮುಂದುವರೆಸಿದ್ದು ವಿಶ್ವವಿಖ್ಯಾತ ಖಾಜಿರಂಗ ವನ್ಯಜೀವಿಧಾಮ ಸಹಿತ ಸುಮಾರು ಅರ್ಧ ಅಸ್ಸಾಂ ನೀರಿನಲ್ಲಿ ಮುಳುಗಿದೆ. ಸಾವಿರಾರು ದಿನ ಬೆಳಗಾಗುವುದರಲ್ಲಿ ಎಲ್ಲ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸುಮಾರು ಶೇ.70ರಷ್ಟು ಅರಣ್ಯ ಪ್ರದೇಶ ಜಲಾವೃತವಾಗಿದೆ. ಭಾರತದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ರಾಜ್ಯ ಅಸ್ಸಾಂನ ಕಾಡು ಈಗ ಜಲಮಯವಾಗಿದೆ.
ಖಾಜಿರಂಗದಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ಅನೇಕ ಸಣ್ಣಪುಟ್ಟ ಪ್ರಾಣಿಗಳು ಕೊಚ್ಚಿಹೋಗಿದ್ದು, ಇತರೆ ಪ್ರಾಣಿಗಳು ಎತ್ತರದ ಸ್ಥಳಗಳಲ್ಲಿ ರಕ್ಷಣೆ ಪಡೆದಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರದ ಮೇಲೆ ನಿರ್ಬಂಧ ಹೇರಿರುವ ಆಡಳಿತ, ಜನ-ಜಾನುವಾರುಗಳ ರಕ್ಷಣೆಗೆ ಹರಸಾಹಸಪಡುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಪರಿಹಾರ ಕಾರ್ಯ ತ್ವರಿತವಾಗಿ ಕೈಗೊಳ್ಳಲು ಆಗುತ್ತಿಲ್ಲ. ಅಸ್ಸಾಂ ಪ್ರವಾಹದ ಕೆಲವು ಚಿತ್ರಗಳು ಇಲ್ಲಿವೆ ನೋಡಿ...
PWDಗಳ ಕಿತ್ತಾಟ
ಅಸ್ಸಾಂನ ಮಯೋಂಗ್ ಪ್ರದೇಶದಲ್ಲಿ ಪ್ರತಿ ವರ್ಷ ಪ್ರವಾಹದಿಂದ ಸಾವಿರಾರು ಜನ ಸಂತ್ರಸ್ತರಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆಗಳ ಕಿತ್ತಾಟದಿಂದ ಪರಿಹಾರ ಕಾರ್ಯ ವಿಳಂಬವಾಗುತ್ತಿದೆ.
ಮಾರಿಗಾಂವ್ ಜಿಲ್ಲಾಡಳಿತ ಹಾಗೂ ಸ್ಥಳೀತ ನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಗಳ ಕಿತ್ತಾಟದಿಂದ ಸಾರ್ವಜನಿಕರು ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ.
ಜನಜೀವನ ಅಸ್ತವ್ಯಸ್ತ
ಅಸ್ಸಾಂನ 27 ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಬ್ರಹ್ಮ ಪುತ್ರ ನದಿಯಲ್ಲಿ ಕ್ಷಣ ಕ್ಷಣಕ್ಕೂ ಪ್ರವಾಹ ಏರುತ್ತಿದ್ದು ಇಡೀ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ವಿಕೋಪದ ಸ್ಥಿತಿ-ಗತಿ
ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೋಯಿ ಅವರ ಜೊತೆ ಪ್ರಕೃತಿ ವಿಕೋಪದ ಸ್ಥಿತಿ-ಗತಿಗಳನ್ನು ಕುರಿತು ಮಾತನಾಡಿರುವ ಪ್ರಧಾನಿ ಮನಮೋಹನ್ ಸಿಂಗ್, ಮಳೆಯಿಂದ ತೀವ್ರ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಬ್ರಹ್ಮಪುತ್ರಾ ಆರ್ಭಟ
ಅಸ್ಸಾಂನ ಜೀವನದಿ ಬ್ರಹ್ಮಪುತ್ರಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜೋಹ್ರಾತ್ ನಿಮತಿಘಾಟ್ ಪ್ರದೇಶದಲ್ಲಿ ಹೆಚ್ಚಿನ ಆರ್ಭಟ ಕಂಡು ಬಂದಿದೆ. ಅಸ್ಸಾಂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರ(ASDMA) ಮಾಹಿತಿ ಪ್ರಕಾರ ಧೆಮಾಜಿ, ನಾಗಾಂವ್ ಜಿಲ್ಲೆಗಳ 52 ಗ್ರಾಮಗಳ 14,000 ಜನರು ಕಳೆದ 24 ಗಂಟೆಗಳಲ್ಲಿ ಪ್ರವಾಹಕ್ಕೆ ಸಿಲುಕಿದ್ದಾರೆ.
ಎಲ್ಲೆಡೆ ಭೀತಿ
ಶಿವಾಸಘರ್ ಜಿಲ್ಲೆಯ ನಾಂಗ್ಲಾಮುರ ಬರ್ಪೆಟಾ ಜಿಲ್ಲೆ ರೋಡ್ ಬ್ರಿಡ್ಜ್, ಸೋನಿತ್ ಪುರ ಜಿಲ್ಲೆಯ ಎನ್ ಟಿ ರಸ್ತೆ ಕ್ರಾಸಿಂಗ್ ಗಳಲ್ಲಿ ಬ್ರಹ್ಮಪುತ್ರಾ ನದಿಯ ಉಪನದಿಗಳು ಹಾವಳಿ ಶುರು ಮಾಡಿಕೊಂಡಿರುವುದು ಜನರ ಆತಂಕವನ್ನು ಹೆಚ್ಚಿಸಿದೆ.
ಪ್ರಾಣಿಗಳಿಗೂ ಜೀವಭಯ
ಖಾಜಿರಂಗ ಸಂರಕ್ಷಿತ ಅರಣ್ಯದಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ಅನೇಕ ಸಣ್ಣಪುಟ್ಟ ಪ್ರಾಣಿಗಳು ಕೊಚ್ಚಿಹೋಗಿದ್ದು, ಇತರೆ ಪ್ರಾಣಿಗಳು ಎತ್ತರದ ಸ್ಥಳಗಳಲ್ಲಿ ರಕ್ಷಣೆ ಪಡೆದಿವೆ. ಆದರೆ, ಪರಿಹಾರ ಸಾಧ್ಯವಾಗದೆ ಪ್ರಾಣಿಗಳು ಭೀತಿಯಲ್ಲಿವೆ
ಹುಡುಕಾಟ
ನದಿ ನೀರು ಎಲ್ಲೆಡೆ ನುಗ್ಗಿ ದ್ವೀಪಗಳನ್ನು ಸೃಷ್ಟಿಸಿದೆ. ಈ ನಡುವೆ ರಕ್ಷಣೆ ಇಲ್ಲದೆ ಪ್ರವಾಹದ ನಡುವೆ ತಮ್ಮವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವೈಮಾನಿಕ ಚಿತ್ರ
ಎತ್ತ ಕಣ್ಣು ಹಾಯಿಸಿದರೂ ನೀರು ತುಂಬಿದೆ. ಅರ್ಧ ಅಸ್ಸಾಂ ನೀರಿನಲ್ಲಿ ಮುಳುಗಿದೆ.