ಸಿದ್ದು ಸಂಪುಟದ ಸಚಿವರಿಗೆ ಬಿಎಸ್ವೈ ಮುಖ್ಯಮಂತ್ರಿ!
ಹೌದು ಅಚ್ಚರಿಯಾದರೂ ಇದು ಸತ್ಯ. ಕೊಪ್ಪಳದಲ್ಲಿ ಇಂದು "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಡ ಜನರಿಗೆ ಸಹಕಾರಿ ಆಗಲಿ ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ" ಎಂದು ಸಚಿವರು ಸಾವಿರಾರು ಜನರ ಮುಂದೆಯೇ ಹೇಳಿ ಪೇಚಿಗೆ ಸಿಲುಕಿದ್ದಾರೆ.
ಆಗಿದ್ದೇನು : ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಬುಧವಾರ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಅನ್ನ ಭಾಗ್ಯ ಯೋಜನೆ ಉದ್ಘಾಟಿಸಬೇಕಾಗಿತ್ತು. ಅದರಂತೆ, ಕೊಪ್ಪಳದಲ್ಲಿ ಯೋಜನೆಗೆ ಚಾಲನೆ ನೀಡಿದ ಸಚಿವರು, ಇದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆ ಎಂದು ಬಣ್ಣಿಸಿದರು.
ಸಚಿವರ ಮಾತು ಹೀಗೆ ಸಾಗಿತು : "ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್ ದಾರರಿಗೆ ಅನುಕೂಲವಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಇರುವ ಜನಪರ ಕಾಳಜಿಗೆ ಸಾಕ್ಷಿ" ಎಂದು ಸಿಎಂರನ್ನು ಹಾಡಿ ಹೊಗಳಿದರು.
ತಕ್ಷಣ ತಮ್ಮ ಪ್ರಮಾದವನ್ನು ಗಮನಿಸಿ ಸರಿ ಪಡಿಸಿಕೊಂಡ ಸಚಿವರು ಕ್ಷಮಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಆದರೆ, ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ಸಿದ್ದರಾಮಯ್ಯ ಸಚಿವ ಸಂಪುಟದಲ್ಲೇ ಮಂತ್ರಿಯಾಗಿರುವ ಶಿವರಾಜ್ ತಂಗಡಗಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವ ಹೇಳಿಕೆ ಕೇಳಿ ಜನರು ಮುಸಿ ಮುಸಿ ನಕ್ಕು ಹಗುರಾದರು.