ಮುಷ್ಕರದ ಬಿಸಿ, ಲೋಡ್ ಮರಳಿಗೆ 35,000 ರೂ!
ರಾಜ್ಯಾದ್ಯಂತ 12,500ಕ್ಕೂ ಹೆಚ್ಚು ಮರಳು ಲಾರಿಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ, ಸಾಗಣೆ ನಿಲ್ಲಿಸಿದ್ದರಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಮರಳಿನ ಅಭಾವ ಸೃಷ್ಟಿಯಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳು ಮರಳಿನ ಕೊರತೆಯಿಂದಾಗಿ ಸ್ಥಗಿತಗೊಳ್ಳುತ್ತಿವೆ.
ಟ್ರ್ಯಾಕ್ಟರ್, ಎತ್ತಿನ ಗಾಡಿ, ಸರಕು ಸಾಗಣೆ ಆಟೋಗಳ ಮೂಲಕ ಬೆಂಗಳೂರಿನ ಕೆಲವು ಕಡೆ ಮರಳು ಸಾಗಣೆ ಮಾಡಲಾಗುತ್ತಿದೆ. ಆದರೆ, ಸಂಗ್ರಹಿಸಿರುವ ಒಂದು ಲೋಡ್ ಮರಳಲು ನೀಡಲು ಲಾರಿ ಮಾಲೀಕರು 35,000ರೂ. ಕೇಳುತ್ತಿದ್ದಾರೆ.
ಮತ್ತಷ್ಟು ಬೆಂಬಲ : ಕರ್ನಾಟಕ ಸ್ಟೇಟ್ ಲಾರಿ ಓನರ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಜತೆಗೆ ಕರ್ನಾಟಕ ಲಾರಿ ಮಾಲೀಕರ ಸಂಘವೂ ಬುಧವಾರದಿಂದ ಮುಷ್ಕರಕ್ಕೆ ಬೆಂಬಲ ನೀಡಲಿದೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಕಂಡುಬರುತ್ತಿದೆ.
ಇಂಧನ ಪೂರೈಕೆ ಸ್ಥಗಿತ ಬೆದರಿಕೆ : ಲಾರಿ ಮಾಲೀಕರ ಬೇಡಿಕೆ ಈಡೇರಿಸದಿದ್ದರೆ, ಜು 20ರಿಂದ ಡಿಸೇಲ್ ಮತ್ತು ಪೆಟ್ರೋಲ್ ಸಾಗಿಸುವ ಲಾರಿಗಳನ್ನು ನಿಲ್ಲಿಸಿ, ಮುಷ್ಕರ ನಡೆಸುವಾಗಿ ಲಾರಿ ಮಾಲೀಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾರ್ಮಿಕರಿಗೆ ಕೆಲಸವಿಲ್ಲ : ಲಾರಿ ಮುಷ್ಕರದಿಂದಾಗಿ ಲಾರಿ ಚಾಲಕ, ಕ್ಲೀನರ್, ಲೋಡರ್ ಗಳಿಗೆ ಕೆಲಸವಿಲ್ಲದಂತಾಗಿದೆ. ಮರಳಿನ ಅಭಾವದಿಂದಾಗಿ ಕಟ್ಟಡ ಕಾರ್ಮಿಕರು ಸುಮ್ಮನೆ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಸರ್ಕಾರದ ಮೌನ : ಮುಷ್ಕರಕ್ಕೆ ಮುನ್ನ ಮಾತುಕತೆಗೆ ಬನ್ನಿ ಎಂದು ಸರ್ಕಾರ ಅನೌಪಚಾರಿಕವಾಗಿ ಲಾರಿ ಮಾಲೀಕರಿಗೆ ಹೇಳಿತ್ತು. ಆದರೆ, ಮುಷ್ಕರ ಪ್ರಾರಂಭವಾಗಿ ಮೂರು ದಿನಗಳು ಕಳೆದರೂ ಸರ್ಕಾರ ಲಾರಿ ಮಾಲೀಕರೊಂದಿಗೆ ಮಾತುಕತೆಗೆ ನಡೆಸಿಲ್ಲ. (ಮರಳು ಲಾರಿ ಮುಷ್ಕರ, ಕಟ್ಟಡ ನಿರ್ಮಾಣ ಕಷ್ಟ)
ಸರ್ಕಾರಕ್ಕೆ ಆದಾಯ : ರಾಜ್ಯದಲ್ಲಿ ಮರಳು ನೀತಿ ಜಾರಿಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗುತ್ತದೆ. ಆದರೂ ಸರ್ಕಾರ, ನೀತಿ ಜಾರಿಗೊಳಿಸಲು ಆಸಕ್ತಿ ತೋರುತ್ತಿಲ್ಲ ಎಂದು ಕರ್ನಾಟಕ ಸ್ಟೇಟ್ ಲಾರಿ ಓನರ್ ಅಸೋಸಿಯೇಷನ್ ಆರೋಪಿಸಿದೆ.
ನೀತಿ ಜಾರಿಗೆ ಬರುವವರೆಗೆ ಹೋರಾಟ : ಸರ್ಕಾರ ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಮರಳು ನೀತಿ ಜಾರಿಗೊಳಿಸುವ ಭರವಸೆ ನೀಡುವ ತನಕ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಲಾರಿ ಓನರ್ ಅಸೋಸಿಯೇಷನ್ ಹೇಳಿದೆ.