ಕರ್ನಾಟಕದ ಜಿಲ್ಲಾ ಸುದ್ದಿಗಳ ಕ್ವಿಕ್ ಲುಕ್
ಬುಧವಾರ ಪ್ರಕರಣದ ತೀರ್ಪು ನೀಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ರಾಮಚಂದ್ರಪ್ಪ ಅವರಿಗೆ 2 ಲಕ್ಷ ದಂಡ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹಾಸನದ ಪುಷ್ಪಾರವಿ ಐಟಿಐ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಲು ಲಂಚ ಸ್ಪೀಕರಿಸುವಾಗ ರಾಮಚಂದ್ರಪ್ಪ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.
ರೈಲಿಗೆ ಸಿಲುಕಿ ಯುವಕರ ಸಾವು : ಕುಡಿದ ಮತ್ತಿನಲ್ಲಿ ರೈಲ್ವೆ ಹಳಿ ದಾಟುತ್ತಿದ್ದ ಇಬ್ಬರು ಯುವಕರು, ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬುಧವಾರ ಮುಂಜಾನೆ ಮೈಸೂರು ಜಿಲ್ಲೆಯ ಮಲ್ಲೇಗೌಡನ ಕೊಪ್ಪಲು ಬಳಿಯ ರೈಲ್ವೆ ಹಳಿಯಲ್ಲಿ ನಡೆದಿದೆ. ಮೃತರನ್ನು ಭರತ್ (22) ಹಾಗೂ ಶ್ರೀನಿವಾಸ್ (20) ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯುತ್ ಸ್ಪರ್ಶ ಯುವಕ ಸಾವು : ಬಂಟ್ವಾಳ ಸಮೀಪದ ಫರಂಗಿಪೇಟೆಯಲ್ಲಿ ತುಂಡಾಗಿ ಬಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಪುದು ಗ್ರಾಮ ಪಂಚಾಯತ್ ಸದಸ್ಯೆ ವಸಂತಿ ಎಂಬವರ ಪುತ್ರ ಮಿಲನ್ (19) ಮೃತ ದುರ್ದೈವಿ. ದನವನ್ನು ಕಟ್ಟಿ ಹಾಕಲೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಎಟಿಎಂ ಒಡೆಯುವ ಸಾಹಸ ವಿಫಲ : ಬೆಂಗಳೂರಿನಲ್ಲಿ ಎಟಿಎಂ ಯಂತ್ರ ಕದಿಯುತ್ತಿದ್ದ ಘಟನೆಗಳು ನಡೆಯುತ್ತಿತ್ತು. ಆದರೆ, ಗಣಿನಾಡು ಬಳ್ಳಾರಿಯ ಗಾಂಧಿನಗರದಲ್ಲಿಯೂ ಮಂಗಳವಾರ ರಾತ್ರಿ ಎಟಿಎಂ ಯಂತ್ರ ಕದಿಯಲು ಚಾಲಕಿ ಕಳ್ಳರು ಪ್ರಯತ್ನಿಸಿದ್ದಾರೆ. ಸುತ್ತಿಗೆಯಿಂದ ಬಡಿದು ಎಸ್ ಬಿಐ ಬ್ಯಾಂಕಿನ ಎಟಿಯಂ ಯಂತ್ರವನ್ನು ಧ್ವಂಸಗೊಳಿಸಿದ್ದಾರೆ. ಸ್ಥಳಕ್ಕೆ ಗಾಂಧಿನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತೆ ಬಂತು ಒಂಟಿ ಸಲಗ : ಕೆಲವು ದಿನಗಳ ಹಿಂದೆ ಗದ್ದಲ ಎಬ್ಬಿಸಿದ್ದ ಆನೆಗಳ ಉಪಟಳ ಮರೆಯುವ ಮುನ್ನವೇ ಹೊಸೂರಿನಲ್ಲಿ ಒಂಟಿ ಸಲಗವೊಂದು ಜನರ ನಿದ್ದೆಗಡಿಸಿದೆ. ಎರಡು ದಿನಗಳಿಂದ ಹೊಸೂರಿನಲ್ಲಿ ಸಲಗ ಸಂಚರಿಸುತ್ತಿದ್ದು, ಬೆಳೆಗಳನ್ನು ನಾಶ ಮಾಡುತ್ತಿದೆ. ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಚರಣೆ ಪ್ರಾರಂಭಿಸಿದ್ದಾರೆ.
ಬೆಲ್ಟ್ ಕಾರ್ಖನೆಯಲ್ಲಿ ಬೆಂಕಿ ಅವಘಡ : ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಳಿಯ ರಾಜೀವ್ ಗಾಂಧಿ ನಗರದಲ್ಲಿ ವಾಹನಗಳ ಸೀಟ್ ಬೆಲ್ಟ್ ತಯಾರಿಸುವ ಕಾರ್ಖನೆಯಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕಿಟ್ ನಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಲಕ್ಷಾಂತರ ರೂಪಾಯಿಗಳ ಕಚ್ಚಾವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ 2 ಅಗ್ನಿ ಶಾಮಕದಳದ ವಾಹನಗಳು ಬೆಂಕಿಯನ್ನು ನಂದಿಸಿದವು.