ಅನ್ನಭಾಗ್ಯ ಯೋಜನೆಗೆ ಸಿದ್ದರಾಮಯ್ಯ ಚಾಲನೆ
ಬೆಂಗಳೂರು, ಜು.10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಒಂದು ರೂ.ಗೆ ಒಂದು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಬುಧವಾರ ಬೆಳಗ್ಗೆ 11.45ಕ್ಕೆ ಸಿಎಂ ಸಿದ್ದರಾಮಯ್ಯ ನಗರದ ಫ್ರೀಡಂ ಪಾರ್ಕ್ ನಲ್ಲಿ, ಮಹಿಳೆಯರಿಗೆ ಅಕ್ಕಿಯ ಚೀಲಗಳನ್ನು ನೀಡುವ ಮೂಲಕ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದರು. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಏಕಕಾಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆಗೆ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಸಿದ್ದರಾಮಯ್ಯ ಘೋಷಿಸಿದ ಯೋಜನೆ ರಾಜ್ಯದಲ್ಲಿ ಇಂದಿನಿಂದ ಜಾರಿಗೆ ಬಂದಿದೆ. ಯೋಜನೆಯ ಜಾರಿಗಾಗಿ ಪ್ರತಿ ತಿಂಗಳು 2.78 ಲಕ್ಷ ಟನ್ ಅಕ್ಕಿ ಅಗತ್ಯವಿದೆ.
ಯೋಜನೆ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಅನ್ನ ಭಾಗ್ಯ ಯೋಜನೆಗಾಗಿಯೇ ಸರ್ಕಾರ 2,80,000 ಮೆಟ್ರಿಕ್ ಟನ್ ಅಕ್ಕಿಯನ್ನು ದಾಸ್ತಾನು ಮಾಡಲಾಗಿದೆ. ರಾಜ್ಯದ 20,441 ಪಡಿತರ ವಿತರಣೆ ಕೇಂದ್ರಗಳಲ್ಲಿ, ಪ್ರತಿ ತಿಂಗಳು ಒಂದು ರೂ.ಗೆ ಒಂದು ಕೆಜಿ ಅಕ್ಕಿವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಎಷ್ಟು ಅಕ್ಕಿ : ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮನೆಯಲ್ಲಿ ಒಬ್ಬರೇ ಇದ್ದರೆ ತಿಂಗಳಿಗೆ 10 ಕೆ.ಜಿ.ಅಕ್ಕಿ ನೀಡಲಾಗುವುದು. ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ, 20 ಕೆ.ಜಿ.ಅಕ್ಕಿ, 3 ಅಥವ ಅದಕ್ಕಿಂತ ಹೆಚ್ಚಿನ ಜನರಿದ್ದರೆ 30 ಕೆಜೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರದಿಂದ 1.78 ಲಕ್ಷ ಟನ್ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಪಡೆಯುತ್ತಿದೆ. ರಾಜ್ಯ ಸರ್ಕಾರ 1.07 ಲಕ್ಷ ಟನ್ ಸಂಹ್ರಹಣೆ ಮಾಡಿ ಕಡು ಬಡವರಿಗೆ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯಿಂದಾಗಿ ಸರ್ಕಾರಕ್ಕೆ 4,500ಕೋಟಿ ಹೊರೆ ಉಂಟಾಗಲಿದೆ ಎಂದು ಸಿಎಂ ತಿಳಿಸಿದರು.
11 ಲಕ್ಷ ಅಂತ್ಯೋದಯ ಮತ್ತು 87 ಲಕ್ಷ ಬಿಪಿಎಲ್ ಕುಟುಂಬಗಳು ಒಂದು ರೂ.ಗೆ ಒಂದು ಕೆಜೆ ಅಕ್ಕಿಯಂತೆ ಮೂವತ್ತು ಕೆಜಿ ಅಕ್ಕಿ ಪಡೆಯಬಹುದಾಗಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ಇಂತಹ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿವೆ. ಕರ್ನಾಟಕ ಈ ಯೋಜನೆ ಜಾರಿಗೊಳಿಸುತ್ತಿರುವ ಮೂರನೇ ರಾಜ್ಯವಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ವಿಪಕ್ಷ ನಾಯಕರಿಗೆ ಆಹ್ವಾನವೇ ಇಲ್ಲ : ಸರ್ಕಾರ ಆರಂಭಿಸಿದ ಅನ್ನ ಭಾಗ್ಯ ಯೋಜನೆ ಕಾಂಗ್ರೆಸ್ ಪಕ್ಷವೇ ಜಾರಿಗೆ ತಂದಂತೆ ಉದ್ಘಾಟನಾ ಸಮಾರಂಭವಿತ್ತು. ಪ್ರತಿಪಕ್ಷದ ಯಾವ ನಾಯಕರಿಗೂ ಸರ್ಕಾರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಸಂಸದ ಪಿ.ಸಿ.ಮೋಹನ್ ಹೆಸರಿತ್ತು. ಆದರೆ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಪಡಿತರ ವ್ಯವಸ್ಥೆ ನಿರ್ವಹಿಸಲು ಕಾಲ್ ಸೆಂಟರ್ : ರಾಜ್ಯದಲ್ಲಿ ಪಡಿತರ ವ್ಯವಸ್ಥೆ ನಿರ್ವಹಣೆಯಲ್ಲಿ ತೊಂದರೆ ಉಂಟಾದರೆ, ಜನರು ದೂರು ನೀಡಲು ಕಾಲ್ ಸೆಂಟರ್ ಆರಂಭಿಸುವುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಡಿತರ ವ್ಯವಸ್ಥೆಯಲ್ಲಿ ಲೋಪದೋಷ ಉಂಟಾಗದಂತೆ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.