ಜಗನ್ನಾಥ ರಥ ಯಾತ್ರೆ ಫೇಸ್ ಬುಕ್ಕಲ್ಲಿ ಲೈವ್
ಅಹಮದಾಬಾದ್, ಜು.8: ಭಾರತದ ಸುಪ್ರಸಿದ್ಧ ಯಾತ್ರೆಗಳಲ್ಲಿ ಒಂದಾದ ಜಗನ್ನಾಥ ಯಾತ್ರೆಗೆ ಹೋಗಲಾಗದ ಭಕ್ತಾದಿಗಳು ಚಿಂತಿಸಬೇಕಾಗಿಲ್ಲ. ಇನ್ಮುಂದೆ ಜಗನ್ನಾಥ ಸ್ವಾಮಿ ರಥಯಾತ್ರೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನೇರವಾಗಿ ಪ್ರಸಾರ ಮಾಡಲು ದೇಗುಲದ ಆಡಳಿತ ಮಂಡಳಿ ಯೋಜನೆ ಹಾಕಿಕೊಂಡಿದೆ.
ಜು.10 ರಂದು ಸುಮಾರು 400 ವರ್ಷಗಳಷ್ಟು ಇತಿಹಾಸವುಳ್ಳ ಮೋದಿ ನಾಡಿನ ಜಗನ್ನಾಥ ದೇಗುಲದಲ್ಲಿ 136ನೇ ರಥ ಯಾತ್ರೆ ಮಹೋತ್ಸವ ನಡೆಯಲಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಜಗನ್ನಾಥ ರಥಯಾತ್ರೆಯ ಬಗ್ಗೆ ಭಕ್ತರು ಹೆಚ್ಚಿನ ಮಾಹಿತಿ ಪಡೆಯಲು ಆರಂಭಿಸಿದ್ದಾರೆ.
ಜಗನ್ನಾಥ
ದೇಗುಲದ
ಟ್ರಸ್ಟ್
ವೆಬ್
ತಾಣದಿಂದ
ಫೇಸ್
ಬುಕ್
ಪುಟಕ್ಕೆ
ಲಿಂಕ್
ಇದೆ
ನೀವು
ಭೇಟಿ
ನೀಡಿ..
ಆನ್
ಲೈನ್
ನಲ್ಲೂ
ಪೂಜೆ
ಸಲ್ಲಿಕೆಗೆ
ಅವಕಾಶ
ಕಲ್ಪಿಸಲಾಗಿದೆ
ಎಂದು
ಆಡಳಿತ
ಮಂಡಳಿ
ಹೇಳಿದೆ.
ಭರ್ಜರಿ ತಯಾರಿ: ಸುಮಾರು 18ಕ್ಕೂ ಅಧಿಕ ಅಲಂಕೃತ ಗಜಪಡೆ, 101 ರಥಗಳು, 38ಕ್ಕೂ ಅಧಿಕ ಅಖಾಡಗಳು ಸ್ತಬ್ದ ಚಿತ್ರಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿವೆ. ಭಾರತೀಯ ಸಂಸ್ಕೃತಿ ಅನಾವರಣಗೊಳಿಸಲು ಕಲಾವಿದರು ಸಜ್ಜಾಗಿದ್ದಾರೆ.
ರೂಢಿಯಂತೆ ಸಂಪ್ರದಾಯ ಗಜಪಡೆ ಮೊದಲಿಗೆ ಜಗನ್ನಾಥ ದೇವರ ದರ್ಶನ ಪಡೆಯಲಿದೆ. ಮೆರವಣಿಗೆಯ ಮುಂದಿನ ಸಾಲಿನಲ್ಲಿ ಗಜಪಡೆ ಸಾಗಲಿದೆ, ನಂತರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ತಂಡಗಳು ಸೇರ್ಪಡೆಗೊಳ್ಳಲಿದೆ.
ಮೋದಿ ಪೂಜೆ: ಜಗನ್ನಾಥ ದೇವರ ರಥಗಳನ್ನು ಸಾಂಕೇತಿಕವಾಗಿ ಸ್ವಚ್ಛಗೊಳಿಸುವ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಗನ್ನಾಥ, ಬಲರಾಮ ಹಾಗೂ ತಂಗಿ ಸುಭದ್ರಾ ದೇವರ ಉತ್ಸವ ಮೂರ್ತಿಗಳ ಜೊತೆಗೆ ಮೆರವಣಿಗೆ ಸಾಗಲಿದೆ.
ಸುಮಾರು 14 ಕಿ.ಮೀ ದೂರದ ಮೆರವಣಿಗೆ ಕಾಲುಪುರ್, ಪ್ರೇಮ ದರ್ವಾಜಾ, ದೆಹಲಿ ಚಕ್ಲಾ, ದರಿಯಾಪುರ ಹಾಗೂ ಶಹಾಪುರ ಪ್ರದೇಶಗಳಲ್ಲಿ ಸಾಗಲಿದೆ. 400 ವರ್ಷಗಳ ಇತಿಹಾಸವುಳ್ಳ ಜಮಲಾಪುರದ ಜಗನ್ನಾಥ ಯಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ದೇಗುಲದ ಟ್ರಸ್ಟಿ ಮಹೇಂದ್ರ ಝಾ ಹೇಳಿದ್ದಾರೆ.
ಈ ರಥಯಾತ್ರೆ ಕೋಮು ಸಾಮರಸ್ಯದ ಪ್ರತೀಕವಾಗಿದೆ. ಬಡವ ಬಲ್ಲಿದ, ದೀನ ದಲಿತ ಹೀಗೆ ಎಲ್ಲಾ ವರ್ಗದ ಜನರು ಈ ರಥ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 25,000 ಹೆಸರುಕಾಳು, 400 ಕೆಜಿ ಮಾವು, 200 ಕೆಜಿ ದಾಳಿಂಬೆ ಹಾಗೂ 200 ಕೆಜಿ ನೇರಳೆ ಹಣ್ಣನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ. ಸುಮಾರು 10,000ಕ್ಕೂ ಅಧಿಕ ಪೊಲೀಸ್ ಪಡೆ ರಥಯಾತ್ರೆಗೆ ಭದ್ರತೆ ಒದಗಿಸಲು ಕಾದಿದೆ. ಎಲ್ಲೆಡೆಯಿಂದ ಭಕ್ತ ಸಮೂಹ ಮೋದಿ ನಾಡಿನತ್ತ ಸಾಗುತ್ತಿದೆ.
ಪಿಟಿಐ