ಮರಳು ಲಾರಿ ಮುಷ್ಕರ, ಕಟ್ಟಡ ನಿರ್ಮಾಣ ಕಷ್ಟ
ಬೆಂಗಳೂರು ಮಹಾನಗರದಲ್ಲಿ ನಿರ್ಮಾಣ ಕಾಮಗಾರಿ, ಮೆಟ್ರೋ ಕಾಮಗಾರಿ ಸೇರಿದಂತೆ ವಿವಿಧ ಬೃಹತ್ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಪ್ರತಿದಿನ ಸುಮಾರು ಆರು ಸಾವಿರ ಲೋಡ್ ಮರಳು ಬೇಕಾಗುತ್ತದೆ.
ನೂತನ ಮರಳು ನೀತಿ ಇಲ್ಲದೆ ಲಾರಿ ಮಾಲೀಕರಿಗೆ, ಚಾಲಕರಿಗೆ ಅನಗತ್ಯ ಕಿರುಕುಳವಾಗುತ್ತಿದೆ. ಪೊಲೀಸರಿಂದ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಈ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ವತಿಯಿಂದ ಅನಿರ್ದಿಷ್ಟಾವಧಿ ಮರಳು ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದು ಮಧ್ಯರಾತ್ರಿಯಿಂದ ಮರಳು ಸಾಗಾಣಿಕೆ ಬಂದ್ ಆಗಲಿದೆ.
ಕಟ್ಟಡ ನಿರ್ಮಾಣಕ್ಕೆ ತೊಂದರೆ: ಕಟ್ಟಡ ನಿರ್ಮಾಣ ಕಾಮಗಾರಿಯ ಮೇಲೆ ಭಾರೀ ಹೊಡೆತ ಬೀಳಲಿದೆ. ಇದಲ್ಲದೆ ಮರಳು ಸಾಗಾಣಿಕೆ, ಮರಳು ಲೋಡ್, ಅನ್ ಲೋಡ್ ಮಾಡುವ ಕಾರ್ಮಿಕರು ಮರಳು ಉದ್ಯಮದ ಮೇಲೆ ಅವಲಂಬಿತವಾಗಿರುವವರು ಸಂಕಷ್ಟಕ್ಕೀಡಾಗಲಿದ್ದಾರೆ.
ಮರಳು ನೀತಿ ಜಾರಿಗೊಳಿಸದೆ ಇರುವುದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವುಂಟಾಗುತ್ತಿದೆ. ಅನಗತ್ಯವಾಗಿ ವಸೂಲಿ ಮಾಡುವ ಹಣ ಅಧಿಕಾರಿಗಳ ಜೇಬು ಸೇರುತ್ತಿದೆ. ಹೊರ ರಾಜ್ಯದಿಂದ ಅಕ್ರಮವಾಗಿ ಮರಳು ಇಲ್ಲಿ ನುಸುಳುತ್ತಿದೆ. ಎಂಬುದು ಸಂಘದವರ ಆರೋಪ.
ಸರ್ಕಾರ ಮರಳು ನೀತಿಯನ್ನು ಜಾರಿಗೊಳಿಸಿ ಸಾಗಾಣಿಕೆಗೆ ಅನುಮತಿ ನೀಡಿದರೆ ಅನುಕೂಲವಾಗುತ್ತದೆ. ಸರ್ಕಾರ ಬಂದು ೫೦ ದಿನಗಳಾದರೂ ಮರಳು ನೀತಿ ಜಾರಿಗೊಳಿಸದೆ ಮೀನಾಮೇಷ ಎಣಿಸುತ್ತಿದೆ. ಇದಕ್ಕಾಗಿ ಪ್ರತಿಭಟನೆ ಅನಿವಾರ್ಯ ಎಂದು ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.
ನಾವು ನಮ್ಮ ಬೇಡಿಕೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ಲೋಕೋಪಯೋಗಿ ಇಲಾಖೆಗೆ ನೀಡಿ 20 ದಿನಗಳು ಕಳೆದಿದೆ ಆದರೆ, ಯಾವುದೇ ಸೂಕ್ತ ಉತ್ತರ ಸಿಕ್ಕಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯ ಎಂದು ಷಣ್ಮುಗಪ್ಪ ತಿಳಿಸಿದರು.